ಮಳವಳ್ಳಿ ಪಟ್ಟಣದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ, ಮಳವಳ್ಳಿ ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಲಯ ಶೀಘ್ರ ವಿಚಾರಣೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಆರೋಪಿಯ ಪ್ರತಿಕೃತಿ ದಹಿಸಲಾಯಿತು.
ಮಾದಿಗ ಸಮಾಜದ ಮುಖಂಡ ನಡಕಲಪುರ ಮಂಜುನಾಥ್ ಮಾತನಾಡಿ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲ್ಲುವ ಮೂಲಕ ಕಾಮುಕ ಕಾಂತರಾಜ್ ಪ್ರಪಂಚವೇ ತಲೆತಗ್ಗಿಸುವ ನೀಚ ಕೃತ್ಯ ಮಾಡಿದ್ದಾನೆ. ನೀಚ ಕೃತ್ಯ ಮಾಡಿರುವ ನೀಚನ ಪರ ಯಾವ ವಕೀಲರೂ ವಕಾಲತ್ತು ವಹಿಸಬಾರದು ಎಂದು ವಕೀಲರ ಸಂಘಕ್ಕೆ ಮನವಿ ಮಾಡಿದರು.
ಪೋಲಿಸರು ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ನ್ಯಾಯಾಲಯದಲ್ಲಿ ಶೀಘ್ರವಾಗಿ ವಿಚಾರಣೆ ನಡೆದು ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು.
ಹೆಣ್ಣು ಅಬಲೆಯಲ್ಲ ಸಬಲೆ, ಹೆಣ್ಣು ಸಮಾಜದ ಕಣ್ಣು ಎಂದು ಹೇಳುತ್ತಾರೆ. ಹತ್ತು ವರ್ಷದ ಹೆಣ್ಣು ಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿರುವ ಆರೋಪಿ ಮನುಷ್ಯನೇ ಅಲ್ಲ.ಈತನಿಗೆ ಗಲ್ಲು ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು.
ಅಶೋಕನಗರ ಕೃಷ್ಣಮೂರ್ತಿ, ಕೃಷ್ಣ, ಬಾಳೆಹೊನ್ನಿಗ ಭೂವಯ್ಯ, ಬಸವರಾಜ್, ಬಿ.ಜಿ ಪುರ ಮಂಟೇಲಿಂಗಯ್ಯ, ಹೂವಿನಕೊಪ್ಪಲು ಸುಂದರ್, ಸುಜ್ಜಲೂರು ನಿಂಗರಾಜು, ಹೊಸಹಳ್ಳಿ ಮುತ್ತುರಾಜು ಸೇರಿದಂತೆ ನೂರಾರು ಮಂದಿ ಹಾಜರಿದ್ದರು.