ದೇವರು ಮತ್ತು ಗುರುವಿನ ಆಶೀರ್ವಾದವಿದ್ದರೆ, ಕ್ಷಣ ಮಾತ್ರದಲ್ಲಿ ಎಲ್ಲವೂ ದೊರೆಯುತ್ತದೆ. ಆದ್ದರಿಂದ ನಾವು ದೇವರು ಮತ್ತು ಗುರುಗಳ ನೆನೆಯಬೇಕು ಎಂದು ಚಂದ್ರವನ ಆಶ್ರಮದ ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ಹೇಳಿದರು.
ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಚಂದ್ರವನ ಆಶ್ರಮದಲ್ಲಿ 115ನೇ ಗುರು ಪೂರ್ಣಿಮೆಯ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ಮತ್ತು ಅರಿವನ್ನು ಪಡೆಯಲು ಗುರು ಸಂಪರ್ಕ ಪಡೆದಿರಬೇಕು. ಧರ್ಮಪೀಠಗಳು ಎಂದರೆ ಹಸಿದು ಬಂದ ಭಕ್ತರಿಗೆ ಪ್ರಸಾದ ನೀಡಿ, ಜ್ಞಾನ, ಸಂಸ್ಕಾರ ನೀಡುವಂತದ್ದಾಗಿರಬೇಕು.
ಅದೇ ನಿಜವಾದ ಗುರುವಿನ ಕರ್ತವ್ಯ. ತಮ್ಮ ಹಿರಿಯ ಶ್ರೀಗಳು ಆರೂಢ ಸ್ಥಿತಿಯಲ್ಲಿದ್ದವರು. ನಾವು ಗುರು ಹತ್ತಿರ ಹೋದಾಗ ನಿಷ್ಠೆ, ಶಿಷ್ಯತ್ವ, ಶರಣಾಗತಿ ಎನ್ನುವುದು ಇದ್ದರೆ ನಮಗೆ ಎಲ್ಲವೂ ಒಲಿಯುತ್ತದೆ. ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಅವರ ಜೀವನ ಹಸನಾಗುತ್ತದೆ ಎಂದು ಗುರುಗಳ ಹಿರಿಮೆಯ ಕುರಿತು ತಿಳಿಸಿದರು.
ಅಪರ ಜಿಲ್ಲಾದಿಕಾರಿ ಆರ್. ಶೈಲಜ ಕಾರ್ಯಕ್ರಮ ಉದ್ಘಾಟಿಸಿ, ತ್ರಿನೇತ್ರ ಶ್ರೀಗಳು ಗ್ರಾಮೀಣ ಭಾಗದಲ್ಲಿನ ಜನತೆಯಲ್ಲಿರುವ ಪ್ರತಿಭೆಯನ್ನು ಹೊರತೆಗೆದು, ಅನೇಕ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾ, ಸಮಾಜಕ್ಕೆ ಒಳ್ಳೆಯ ಮಾರ್ಗವನ್ನು ತೋರಿಸುತ್ತಾ, ಸಮಾಜಮುಖಿಯಾಗಿ ಸಾರ್ವಜನಿಕ ಕಲ್ಯಾಣಕ್ಕಾಗಿ ಗುರುಸದೃಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿಯೊಬ್ಬರಿಗೂ ಮುಂದೆ ಗುರಿ ಇರಬೇಕು.ಹಿಂದೆ ಗುರು ಇರಬೇಕು. ಗುರು ಎಂದರೆ ಕೇವಲ ಅಕ್ಷರ ಕಲಿಸಿ ಶಿಕ್ಷಣವನ್ನು ನೀಡುವವರೇ ಅಲ್ಲ, ಹೆತ್ತ ತಾಯಿಯೂ ಹೌದು, ಕೈ ಹಿಡಿದು ನಡೆಸುವ ತಂದೆಯೂ ಹೌದು. ಎಲ್ಲರ ಬಾಳಿನಲ್ಲಿ ಗುರುವಿನ ಪಾತ್ರ ಮಹತ್ತರವಾದುದು ಎಂದರು.
ಮನ್ಮುಲ್ ಅಧ್ಯಕ್ಷ ರಾಮಚಂದ್ರ,ಕಂತ್ಯಾನಹಟ್ಟಿ ಅಪ್ಪಯ್ಯದೇವರು ಕಲ್ಲಯ್ಯಸ್ವಾಮಿ,ಟಿ.ಪಿ.ಶಿವಕುಮಾರ್ರವರು ಉಪಸ್ಥಿತರಿದ್ದರು.