ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸುವುದರ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದೇ ನನ್ನ ಆದ್ಯತೆ ಎಂದು ಸಮಾಜ ಸೇವಕ ಮಲ್ಲಿಕಾರ್ಜುನ್ (ಫೈಟರ್ ರವಿ) ತಿಳಿಸಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ತರಮನಕಟ್ಟೆ ಸರ್ಕಾರಿ ಶಾಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಫೈಟರ್ ರವಿ ಅವರು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು.ಈ ಹಿನ್ನಲೆಯಲ್ಲಿ ಶಾಲೆಗಳ ಅಭಿವೃದ್ಧಿಗೆ ನನ್ನ ಕೈಲಾದ ಸಹಾಯ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸುವುದು ಮುಖ್ಯವಲ್ಲ. ನೀರನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಇದೇ ನೀರನ್ನು ಬಿಸಿ ಊಟಕ್ಕೂ ಸಹ ಬಳಸಬಹುದು.ಶಿಕ್ಷಣ ಉನ್ನತ ಸ್ಥಾನವನ್ನು ಪಡೆಯುವ ಸಾಧನವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಷ್ಟಪಟ್ಟು ಕಲಿಕೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು.ನೀವು ಪಡೆದ ಶಿಕ್ಷಣದಿಂದ ಇಡೀ ಸಮಾಜವೇ ನಿಮ್ಮನ್ನು ಗೌರವಿಸುತ್ತದೆ ಎಂದರು.
ಈ ವೇಳೆ ತರಮನಕಟ್ಟೆ ಶಾಲೆಯ ಮಕ್ಕಳೊಂದಿಗೆ ಮಾತನಾಡಿ, ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು 20 ಸಾವಿರ ಸಹಾಯಧನ ನೀಡಿದರು.
ಕೌಡ್ಲೆಯಿಂದ ತರಮನಕಟ್ಟೆಗೆ ಬರುವ ರಸ್ತೆಯು ಗುಂಡಿಯಾಗಿದೆ. ಆದ್ದರಿಂದ ರಸ್ತೆ ಸರಿಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದಾಗ, ಗ್ರಾಮಸ್ಥರಿಗೆ ರಸ್ತೆಯ ಗುಂಡಿ ಮುಚ್ಚಿ ಗಿಡ ಗೆಂಟೆಗಳನ್ನು ತೆರವುಗೊಳಿಸಲು 10 ಸಾವಿರ ಸಹಾಯಧನ ನೀಡಿದರು.
ಇದೇ ನವೆಂಬರ್ 20 ರಂದು ಕೊಪ್ಪದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು, 150 ಮಂದಿ ವೈದ್ಯರ ತಂಡ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಲಿದ್ದು,ತಾಲ್ಲೂಕಿನ ಜನರು ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ ಸದಸ್ಯ ಪುಟ್ಟಸ್ವಾಮಿ, ಸುಂದರೇಶ್, ಶಂಕರೇಗೌಡ, ಜವರೇಗೌಡ, ಕುಮಾರ, ಸತೀಶ್, ರಮೇಶ್, ಮಾಯಣ್ಣ, ಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು.