ಗುರುವು ಜ್ಞಾನದೀವಿಗೆಯನ್ನು ಹಿಡಿದು ಅಜ್ಞಾನದ ಅಂಧಕಾರವನ್ನು ದೂರ ಮಾಡುವ ದಾರಿದೀಪ. ವಿದ್ಯಾರ್ಥಿಗಳು ಗುರುವಿನ ಜ್ಞಾನವನ್ನು ಶ್ರದ್ಧೆಯಿಂದ ಆಲಿಸಿ, ಪ್ರಶ್ನಿಸುವ ಮೂಲಕ ಜ್ಞಾನ ಸಂಪಾದನೆ ಮಾಡಬೇಕೆಂದು ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್ ಕುಮಾರ್ ಅಭಿಪ್ರಾಯಪಟ್ಟರು.
ಗುರುಪೂರ್ಣಿಮೆ ಅಂಗವಾಗಿ ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ ಅವರ ಮಾರ್ಗದರ್ಶನದಲ್ಲಿ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಎಜುಕೇಶನ್ ಸೆಂಟರ್ ಆವರಣದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ,ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಪುಷ್ಪಾಲಂಕಾರ ಮತ್ತು ವಿಶೇಷ ಪೂಜೆ ಸಲ್ಲಿಸುವ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದವು.
ಜ್ಞಾನ ವೃದ್ಧಿಯಾಗಲು ಗುರುವಿನ ಮಾರ್ಗದರ್ಶನ ಬೇಕು. ಸಂಸ್ಕಾರ ನಡೆನುಡಿ ತತ್ವಗಳ ಪ್ರತೀಕವೇ ಗುರು. ಜ್ಞಾನ ಸಂಗ್ರಹಕ್ಕೆ ಗುರುಕುಲ ಮಾರ್ಗದರ್ಶನ ನೀಡುತ್ತದೆ. ಆದರೆ ಸಂಗ್ರಹಿಸುವ ಗುಣ ವಿದ್ಯಾರ್ಥಿಗಳಲ್ಲಿರಬೇಕು. ಅದಕ್ಕಾಗಿ ಶೋಧನೆ ಅಗತ್ಯ. ನಾವು ನಿಷ್ಠೆ, ಆತ್ಮವಿಶ್ವಾಸದಿಂದ ಕಲಿಯುವ ವಿದ್ಯಾರ್ಥಿಗಳಾಗೋಣ. ಪ್ರಯತ್ನದ ಮೂಲಕ ಜ್ಞಾನ ಸಂಗ್ರಹ ಮಾಡುವುದೇ ನಿಜವಾದ ಶಿಷ್ಯತ್ವ ಎಂದು ಗುರುಪೂರ್ಣಿಮೆಯ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ದರ್ಶನ್, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಹಿರಿಯ ಪತ್ರಕರ್ತ ಗಂಜಿಗೆರೆ ಮಹೇಶ್. ಪ್ರಾಂಶುಪಾಲಗಳಾದ ಆನಂದ್,ರವಿ ಸೇರಿದಂತೆ ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.