ಮಂಡ್ಯ ತಾಲ್ಲೂ ಚಿಕ್ಕಮಂಡ್ಯದ ವಸತಿರಹಿತ ಜನರಿಗೆ ಹೆಚ್.ಕೋಡಿಹಳ್ಳಿ ಸರ್ವೆ ನಂ 67ರಲ್ಲಿ 2018ನೇ ಇಸವಿಯಲ್ಲಿ ನಿವೇಶನ ಹಂಚಿಕೆ ಮಾಡಿದ್ದು, ಈ ಕೂಡಲೇ ರಸ್ತೆ, ಚರಂಡಿ, ನೀರು, ವಿದ್ಯುತ್ ಒಳಗೊಂಡಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮವಹಿಸಬೇಕೆಂದು ಆಗ್ರಹಿಸಿ ಮಂಡ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ನಿವೇಶನ ಹಂಚಿಕೆಯಾಗಿರುವ ಬಡಾವಣೆಗೆ ಮುಖ್ಯ ರಸ್ತೆಯಿಂದ ಸಂಪರ್ಕ ರಸ್ತೆ ಕಲ್ಪಿಸಲು ರಸ್ತೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನಕ್ಕೆ ಅಗತ್ಯ ಕ್ರಮವಹಿಸಬೇಕು. ಹಕ್ಕು ಪತ್ರ ವಿತರಿಸಿರುವ ಎಲ್ಲರಿಗೂ ಮನೆ ನಿರ್ಮಾಣ ಮಾಡಿಕೊಂಡು ವಾಸಿಸಲು ರಾಜೀವ್ ಗಾಂಧಿ ವಸತಿ ನಿಗಮದಿಂದ ಸಹಾಯ ಧನ ಬಿಡುಗಡೆ ಮಾಡಿಸಬೇಕೆಂದು ಆಗ್ರಹಿಸಿದರು.
ವಾಸಮಾಡಲು ಯೋಗ್ಯವಲ್ಲದ ಭೂಮಿಯನ್ನು ಖರೀದಿಸಿ ಅಮಾಯಕ ಚಿಕ್ಕಮಂಡ್ಯದ ವಸತಿ ರಹಿತ ಜನರಿಗೆ ಹಂಚಿಕೆ ಮಾಡಿ ಭೂ ಮಾಲೀಕರ ಹತ್ತಿರ ಕಮಿಷನ್ ಹಣ ಪಡೆದು ಸರ್ಕಾರಕ್ಕೆ ವಂಚಿಸಿ ಅಕ್ರಮವೆಸಗಿರುವ ಅಧಿಕಾರಿಗಳು ಮತ್ತು ದಲ್ಲಾಳಿಗಳ ವಿರುದ್ಧ ತನಿಖೆಗೆ ಒಳಪಡಿಸಿ ಅವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಂದು ಆಗ್ರಹಿಸಿದರು.
ಚಿಕ್ಕಮಂಡ್ಯದ 62ವಸತಿ ರಹಿತ ಜನರನ್ನು ಆಯ್ಕೆ ಮಾಡಿದ್ದು ಇವರಲ್ಲಿ 29 ಜನರಿಗೆ ಹಕ್ಕು ಪತ್ರ ವಿತರಿಸಿದ್ದು ಉಳಿದ 33 ಜನರಿಗೆ ಈ ತಕ್ಷಣವೇ ಹಕ್ಕುಪತ್ರ ವಿತರಿಸಬೇಕು ಹಾಗೂ ವಾಸಿಸಲು ಯೋಗ್ಯವಾಗುವಂತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಅಂದಾನಿ ಸೋಮನಹಳ್ಳಿ, ಶಿವು, ಬಿ.ಎಂ.ಸತ್ಯ, ಬಸವರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.