ಮಂಡ್ಯ ನಗರದ ಹಾಲಹಳ್ಳಿ ಸ್ಲಂ ಬೋರ್ಡ್ ನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಹಂಚಿಕೆ ಮಾಡಿದ ಮನೆಗಳನ್ನು ಬಿಟ್ಟು ಬೇರೆ ಮನೆಗಳಲ್ಲಿ ಅಕ್ರಮವಾಗಿ ಸೇರಿಕೊಂಡಿದ್ದವರನ್ನು ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ತೆರವುಗೊಳಿಸಿದರು.
ಇಂದು ಬೆಳಿಗ್ಗೆ ಜಿಲ್ಲಾಡಳಿತ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಹಾಲಹಳ್ಳಿ ಸ್ಲಂ ಬೋರ್ಡ್ ಗೆ ತೆರಳಿ ತಮಗೆ ಹಂಚಿಕೆ ಮಾಡಿದ ಮನೆಗಳನ್ನು ಬಿಟ್ಟು, ತಮಗೆ ಇಷ್ಟ ಬಂದ ಹಾಗೆ ಸೇರಿಕೊಂಡಿದ್ದ ಮನೆಗಳಿಂದ ಸ್ಲಂ ನಿವಾಸಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ಲಂ ನಿವಾಸಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪೊಲೀಸರ ಸಮ್ಮುಖದಲ್ಲಿ 50 ಕ್ಕೂ ಹೆಚ್ಚು ಸ್ಲಂ ನಿವಾಸಿಗಳನ್ನು ಬಲವಂತವಾಗಿ ತೆರವುಗೊಳಿಸಲಾಯಿತು.
ಸ್ಲಂ ನಿವಾಸಿಗಳು ಅಧಿಕಾರಿಗಳು ದೌರ್ಜನ್ಯ ಮಾಡಿ ಬಲವಂತವಾಗಿ ತೆರವುಗೊಳಿಸಿದ್ದಾರೆ. ನಮಗೆ ನಾವು ಈ ಹಿಂದೆ ವಾಸ ಮಾಡಿದ್ದ ಮನೆಗಳನ್ನೇ ಹಂಚಿಕೆ ಮಾಡಿ ಎಂದು ಮನವಿ ಮಾಡಿದ್ದೆವು. ಆದರೆ ನಾವು ಹೇಳಿದಂತೆ ಹಂಚಿಕೆ ಪತ್ರ ನೀಡುವುದನ್ನು ಬಿಟ್ಟು ತಮಗೆ ಇಷ್ಟ ಬಂದ ಹಾಗೆ ಅಧಿಕಾರಿಗಳು ಮನೆ ಹಂಚಿಕೆ ಮಾಡಿದ್ದಾರೆ. ಇದರಿಂದ ನಮಗೆ ಬಹಳ ಸಮಸ್ಯೆಯಾಗಿದೆ. ಈ ಹಿಂದೆ ನಮಗೆ ಯಾವ ರೀತಿ ಮನೆ ಹಂಚಿಕೆ ನಡೆದಿತ್ತೋ, ಅದೇ ರೀತಿ ಹೊಸ ಮನೆಗಳ ಹಂಚಿಕೆ ನಡೆಯಬೇಕು ಎಂದು ಒತ್ತಾಯಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯ ತಾಂತ್ರಿಕ ನಿರ್ದೇಶಕ ಬಿಳಿಗಿರಿ ಸ್ವಾಮಿ ಮಾತನಾಡಿ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆ ಮಾಡಿದಂತೆ ನಿವಾಸಿಗಳು ಮನೆ ಸೇರಬೇಕಿತ್ತು. ಆದರೆ ಅವರು ತಮಗೆ ಇಷ್ಟ ಬಂದ ಹಾಗೆ ಮನೆ ಸೇರಿ ಕೊಂಡಿದ್ದರು. ಈ ಬಗ್ಗೆ ಅವರಿಗೆ ಕರಪತ್ರದ ಮೂಲಕ, ಆಟೋ ಪದರಚಾರದ ಮೂಲಕ ಎರಡು ಮೂರು ಬಾರಿ ತೆರವುಗೊಳಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಹಾಗಾಗಿ ಇಂದು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸುತ್ತಿದ್ದೇವೆ.ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದಿಲ್ಲ ಎಂದರು. ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಇ ಹರೀಶ್, ಎಇಇ ದರ್ಶನ್, ಇಂಜಿನಿಯರ್ ನಾಗೇಂದ್ರ ಮತ್ತಿತರರಿದ್ದರು.