ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಮಂಡ್ಯ ಜಿಲ್ಲೆಯ ದಳಪತಿಗಳು ಜೆಡಿಎಸ್ ಯುವ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ (ಜ.11) ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯ ಜೆ.ಪಿ. ಭವನದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಿದ್ದತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ, ಸಭೆಯಲ್ಲಿ ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಡಾ.ಕೆ.ಅನ್ನದಾನಿ, ಮುಖಂಡ ಗುರುಕಿರಣ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ನಾವೇ ಗೆಲ್ಲುತ್ತೇವೆ ಎಂದು ಹೆಚ್.ಡಿ.ಕೆ
ಬಿಜೆಪಿ ಜೊತೆ ಹೊಂದಾಣಿಕೆ ಆಗಿರುವುದರಿಂದ ಈ ಬಾರಿ ಮಂಡ್ಯದಲ್ಲಿ ನಮಗೆ ಗೆಲುವು ನಿಶ್ಚಿತ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 2 ದಿನಗಳಿಂದ ಚಿಕ್ಕಮಗಳೂರಿನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿಯ ಚುನಾವಣೆ ಬೇರೆಯೇ ಇತ್ತು. ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು ಎರಡು-ಮೂರು ಪರ್ಸೆಂಟ್ ಮತದಾರರು ಮಾತ್ರವೇ ನಮ್ಮ ಪರ ಇದ್ದರು. ಈಗ ವಾತಾವರಣ ಬದಲಾಗಿದೆ’ ಎಂದರು.
ರಾಜ್ಯದ ರಾಜಕೀಯದ ಬಗ್ಗೆ ಚರ್ಚೆ ಆಗಿದೆ. ನಮ್ಮ ಅಭ್ಯರ್ಥಿಗಳು ಬಿಜೆಪಿ ಪಕ್ಷದವರ ವಿಶ್ವಾಸವನ್ನು ಹೇಗೆ ಪಡೆಯಬೇಕು. ಅವರು ನಮ್ಮ ಕಾರ್ಯಕರ್ತರ ವಿಶ್ವಾಸವನ್ನು ಹೇಗೆ ಪಡೆಯಬೇಕು ಎಂಬ ಚರ್ಚೆಗಳೂ ಆಗಿವೆ. ಮಂಡ್ಯ, ಮೈಸೂರು ಹಾಗೂ ಹಾಸನದ ಬಗ್ಗೆಯೂ ಮಾತನಾಡಿದ್ದೇವೆ’ ಎಂದಿದ್ದಾರೆ.
‘ಮೈತ್ರಿಯಿಂದ ವರ್ಚಸ್ಸು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚನ್ನೂ ಇದೆ. ರಾಮ ಮಂದಿರ ಉದ್ಘಾಟನೆ ವಿಷಯ ಮುಂಚೂಣಿಯಲ್ಲಿದೆ. ಸ್ಥಿರ ಸರ್ಕಾರ ಬರಬೇಕು ಎಂಬ ಆಶಯ ದೇಶದ ಜನರಿಗಿದೆ. ಎರಡೂ ಪಕ್ಷಗಳಿಗೂ ನಮ್ಮ ನಮ್ಮ ಶಕ್ತಿ ಏನು ಎಂಬುದು ಗೊತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.