ಬಡವರಿಗೆ ಕ್ಯಾನ್ಸರ್ ಸೇರಿದಂತೆ ದೊಡ್ಡ ಖಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳಲು ಸಾವಿರಾರು ರೂಪಾಯಿ ಭರಿಸಲು ಸಾಧ್ಯವಾಗುತ್ತಿಲ್ಲ, ಒಂದು ಸಣ್ಣ ರೋಗಕ್ಕೂ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರಗಳು ಮಧ್ಯಮ ವರ್ಗದ ಬಡವರಿಗೆ ಅನುಕೂಲವಾಗಲಿದೆ ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಅಶೋಕ್ ಜಯರಾಂ ಹೇಳಿದರು.
ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರ ಯುವಕರ ಸಂಘದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ವೈದ್ಯರು ಕೇವಲ ಐದು ರೂಪಾಯಿ ಮತ್ತು ಹತ್ತು ರೂಪಾಯಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ, ಇನ್ನೂ ಕೆಲವು ವೈದ್ಯರು ಉಚಿತವಾಗಿ ಸೇವೆ ನೀಡುತ್ತಿದ್ದಾರೆ, ಆದರೆ ಇವರ ನಡುವೆ ಸೇವಾ ಮನೋಭಾವದಿಂದ ಕೆಲಸ ಮಾಡುವ ವೈದ್ಯರು ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸ್ಲರ್ ತಜ್ಞೆ ಡಾ.ಕೆ.ಶೋಭ ಮಾತನಾಡಿ, ಕ್ಯಾನ್ಸರ್ ರೋಗಕ್ಕೂ ಚಿಕಿತ್ಸೆ ಇದೆ. ಕೊನೆ ಹಂತದಲ್ಲಿ ಬರುವ ವ್ಯಕ್ತಿಗಳೇ ಹೆಚ್ಚಿದ್ದಾರೆ, ಎಲ್ಲ ಸೌಲಭ್ಯವೂ ನಿಮ್ಮ ಹತ್ತಿರದಲ್ಲೇ ಸಿಗುತ್ತಿರುವಾಗ, ಆ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಣಕನಹಳ್ಳಿ, ಕೋಣನಹಳ್ಳಿ, ತಂಡಸನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆರೋಗ್ಯ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ನುರಿತ ವೈದ್ಯಾಧಿಕಾರಿಗಳ ತಂಡದವರು ಭಾಗವಹಿಸಿ, ಸ್ಥಳದಲ್ಲಿಯೇ ಔಷಧಿ ನೀಡಿದರು. ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಪಿ.ಎಸ್.ಅರವಿಂದ್, ಡಾ.ಎಚ್.ಎಸ್.ರವಿಕುಮಾರ್, ಡಾ.ಭಾನುಶ್ರೀ, ಡಾ.ಅರುಣ್, ಡಾ.ಕೆ.ಬಿ.ಜವರೇಗೌಡ, ಪ್ರವೀಣ್ ಕುಮಾರ್, ಪಿ.ಎಸ್.ರವಿ, ಯೋಗೇಶ್, ಶಶಿಕಾಂತ್, ಶಿವಲಿಂಗು, ಅರುಣ್ ಕುಮಾರ್, ಅರ್ಚನ್ ಕುಮಾರ್ ಭಾಗವಹಿಸಿದ್ದರು.