ಪ್ರೊ.ನಂಜರಾಜೇ ಅರಸ್ ಆಕ್ರೋಶ
ಸಮಾಜದಲ್ಲಿ ಧರ್ಮ ದ್ವೇಷದ ಕಿಚ್ಚು ಹಚ್ಚಿರುವ ಆಡಳಿತರೂಢ ಬಿಜೆಪಿ ಸರ್ಕಾರ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷ ಸೃಷ್ಟಿಸಿದೆ ಎಂದು ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದ ಅಂಬೇಡ್ಕರ್ ಭವನದ ಬಳಿ ಸಮಾನ ಮನಸ್ಕರ ವೇದಿಕೆ ಏರ್ಪಡಿಸಿದ್ದ ಬಹು ಸಂಸ್ಕೃತಿ ಸಾಮರಸ್ಯ ಮೇಳದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಗುತ್ತಿಗೆ ಪಡೆದವರಂತೆ ಮಾತನಾಡುತ್ತಿರುವ ಸ್ವಾಮೀಜಿಗಳು, ಹಿಂದೂ ಪರ ಸಂಘಟನೆಯವರು ಹಾಗೂ ಪ್ರಮೋದ್ ಮುತಾಲಿಕ್ ಕೋಮು ಸಾಮರಸ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರೂ ಸಹ ಸರಕಾರ ಮೌನ ವಹಿಸಿದೆ, ಕೇಸರಿ ಶಾಲು ಹಾಕಿಕೊಂಡು ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ವಿರುದ್ಧ ಟೀಕೆ ಮಾಡಿದರು ಎಂಬ ಕಾರಣಕ್ಕೆ ಪ್ರಗತಿಪರ ನಿಲುವಿನ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸುವ ಬಿಜೆಪಿ ಸರ್ಕಾರ ಜಾಮೀನು ಪಡೆದು ಹೊರ ಬಂದರೂ ಸಹ ಮತ್ತೊಂದು ಪ್ರಕರಣ ದಾಖಲಿಸಿ ಬಂಧಿಸುತ್ತದೆ. ಕೊನೆಗೆ ನ್ಯಾಯಾಲದಿಂದ ಛೀಮಾರಿ ಹಾಕಿಸಿಕೊಂಡಿದೆ. ರಾಜ್ಯದಲ್ಲಿಯೂ ಸಹ ಸರಕಾರ ಧರ್ಮ ವಿರೋಧಿ ಕಿಚ್ಚಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿ ಇಬ್ಬಂದಿತನ ಪ್ರದರ್ಶಿಸುತ್ತಿದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಕುರಿತ ಪುಸ್ತಕಕ್ಕೆ ಸಮರ್ಥ ಆಡಳಿತಗಾರ, ಮೈಸೂರು ಹುಲಿ ಎಂದು ಸಂದೇಶ ನೀಡಿದ್ದರೆ, ಗೋವಿಂದ ಕಾರಜೋಳ ಜನಪರ ಆಡಳಿತಗಾರ ಎಂದಿದ್ದರು.
ಆದರೆ ಈಗಿನ ಸರಕಾರದವರು ಟಿಪ್ಪು ವಿರೋಧಿಸುತ್ತಿದ್ದಾರೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ದ್ವೇಷದ ಭಾವನೆ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.
ಟಿಪ್ಪು ಸುಲ್ತಾನ್ ಪ್ರಬಲ ಎದುರಾಳಿಯಾಗಿದ್ದರಿಂದಲೇ ಬ್ರಿಟಿಷರು ಆತನ ಬಗ್ಗೆ ಸುಳ್ಳಿನ ಸರಮಾಲೆಯ ಕಥೆಯನ್ನೇ ಕಟ್ಟಿದರು, ಶತಮಾನಗಳ ನಂತರ ದೇಶದ ಇತಿಹಾಸ ತಜ್ಞರು ಅದೇ ಸುಳ್ಳನ್ನು ದಾಖಲಿಸುತ್ತಾ ಹೋಗಿದ್ದಾರೆ,
ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಕರೆದು ಚಾರಿತ್ರ್ಯವಧೆ ಮಾಡಿದಂತೆ ಟಿಪ್ಪು ವಿಚಾರದಲ್ಲಿ ಬಿಜೆಪಿಯವರು ಸುಳ್ಳಿನ ಕಥೆ ಕಟ್ಟುತ್ತಿದ್ದಾರೆ ಮೊದಲು ಟಿಪ್ಪುವಿನ ಬಗ್ಗೆ ಅಧ್ಯಯನ ಮಾಡಿ ಅನಂತರ ಮಾತನಾಡಲಿ,ಅವಾಗ ಸತ್ಯ ತಿಳಿಯಲಿದೆ ಎಂದು ಹೇಳಿದರು.
ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದರೂ ಜನರನ್ನು ಸುಲಿಗೆ ಮಾಡದ ಟಿಪ್ಪು ಮದ್ಯ ಮಾರಾಟ ನಿಷೇಧ ವಾಪಸ್ ಪಡೆಯಲಿಲ್ಲ, ಮಲಬಾರ್ ನಲ್ಲಿ ಹೆಣ್ಣುಮಕ್ಕಳ ಶೋಷಣೆಯ ಕಟ್ಟುಪಾಡುಗಳನ್ನು ತೆಗೆದುಹಾಕಿದನು,
ಹಿಂದೂಗಳ ದೇವಾಲಯವನ್ನು ನೆಲಸಮ ಮಾಡಿದ್ದಾನೆಂಬುದು ಸುಳ್ಳು, ಶ್ರೀರಂಗಪಟ್ಟಣದಲ್ಲಿ ಶತ್ರುಗಳ ಚಲನವಲನದ ಮೇಲೆ ನಿಗಾ ಇರಿಸಲು ಮಸೀದಿ ರೂಪದಲ್ಲಿ ವೀಕ್ಷಣ ಗೋಪುರ ನಿರ್ಮಿಸಿದ್ದನು.
ಹಿಂದೂ ದೇವಾಲಯದ ರೀತಿ ಇದ್ದರೆ ಚಪ್ಪಲಿ ಧರಿಸಿ ಹೋಗಲು ಸಾಧ್ಯವಿಲ್ಲ ಎಂಬುದನ್ನರಿತು ಮಸೀದಿ ಸ್ವರೂಪದಲ್ಲಿ ಮಾಡಲಾಗಿದೆ.
ಇದು ನಾಡಿನ ಜನರ ಹಿತಕ್ಕಾಗಿ ಮಾಡಿದ ಕೆಲಸವಾಗಿದೆ ಎಂದು ಹೇಳಿದರು.