ಹಿಟ್ಲರ
ಅರಮನೆಯಲ್ಲಿ ಹುಟ್ಟಲಿಲ್ಲ
ಸಾಮಾನ್ಯನ ಮನದ ಸಂದಿಯಲ್ಲಿ
ಸೈತಾನನ ಮೊಟ್ಟೆಗಳಿಗೆ
ಕಾವು ಸಿಕ್ಕದಿರೆ
ಹಿಟ್ಲರನ ತೊಟ್ಟಿಲು ತೂಗುತ್ತಿರಲಿಲ್ಲ ..
ರಾಜಬೀದಿಯಲ್ಲಿ
ನಾಯಿಕುನ್ನಿಗಳ ಸಾವನ್ನು
ಲೆಕ್ಕವಿಡದ ರಾಜಧರ್ಮ
ನರಕದ ಆಕ್ರಂದನಗಳನ್ನು
ರಸಭಂಗವೆನ್ನುವ
ಮನೋಧರ್ಮ ..
ಯಾವುದು ಬುನಾದಿ?
ಯಾವದು ಮಹಲು?
ಬೇರ್ಪಡಿಸಬಹುದೇ ಈ ಸಯಾಮೀ ಕವಲು?
ಸಿಂಹಾಸನಗಳಿಗೆಲ್ಲಾ
ಒಂದೆ ಅಡಿಪಾಯ,
ಪ್ರತಿಮನದ
ದ್ವೇಷಾಸೂಯೆಯ ರಾಜಸೂಯ..
ಹಿಟ್ಲರನ ಮೊಟ್ಟೆ
ನನ್ನೊಳಗೆ ಮರಿ ಇಟ್ಟರೆ
ಹಿಟ್ಲರನು ಸಾಯುವುದೆಂತು?
ನಾನು ಬದುಕುವುದೆಂತು?
✍🏿 ಶಿವಸುಂದರ್