ಎಚ್ಐವಿ- ಏಡ್ಸ್ ತಡೆಗಟ್ಟುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್ ಕುಮಾರ್ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸೆನ್ಸ್ ಸೊಸೈಟಿ, ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಮಂಡ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಸಗರಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಎಚ್ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಬೀದಿ ನಾಟಕ ಕಾರ್ಯಕ್ರಮಕ್ಕೆ ತಮಟೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಎಚ್ಐವಿ ಏಡ್ಸ್ ಬಗ್ಗೆ ಯುವ ಪೀಳಿಗೆಯ ಯುವ ಜನರಿಗೆ ತಿಳಿಸಬೇಕಾಗಿದೆ, ಎಚ್ಐವಿ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ತಪ್ಪು ಮಾಹಿತಿ ಇದೆ. ಎಚ್ಐವಿ ವೈರಾಣು ಕೇವಲ ನಾಲ್ಕು ಮಾರ್ಗದಿಂದ ಮನುಷ್ಯನ ದೇಹವನ್ನು ಸೇರುತ್ತದೆ. ಅಪರಿಚಿತರೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ, ಸೂಜಿ ಸಿರಂಜನ್ನು ಅಸುರಕ್ಷಿತವಾಗಿ ಬಳಸುವಾಗ, ಅಸುರಕ್ಷಿತ ರಕ್ತವನ್ನು ಪಡೆಯುವಾಗ ,ಗರ್ಭಿಣಿ ಮಹಿಳೆ ಎಚ್ಐವಿ ಸೋಂಕಿತಳಾಗಿದ್ದರೆ ಹುಟ್ಟುವ ಮಗು ಹೆಚ್ಐವಿ ಬರುವ ಸಾಧ್ಯತೆ ಇದೆ. ಈ ನಾಲ್ಕು ಮಾರ್ಗ ಬಿಟ್ಟರೆ ಯಾವುದೇ ಮಾರ್ಗದಿಂದ ಬರುವುದಿಲ್ಲ ಇದರ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಜನಾರ್ಧನ್ ಮೂರ್ತಿ ಮಾತನಾಡಿ, ಎಚ್ಐವಿ ಸೋಂಕಿತ ವ್ಯಕ್ತಿಯನ್ನು ಮುಟ್ಟುವುದರಿಂದ ಜೊತೆಯಲ್ಲಿ ಊಟ ಮಾಡುವುದರಿಂದ ಅವರು ಹಾಕಿಕೊಂಡ ಬಟ್ಟೆಯನ್ನು ನಾವು ಹಾಕಿಕೊಳ್ಳುವುದರಿಂದ, ಅವರು ಬಳಸಿದ ಶೌಚಾಲಯವನ್ನು ನಾವು ಬಳಸುವುದರಿಂದ ಎಚ್ಐವಿ ಬರುವುದಿಲ್ಲ, ಅವರನ್ನು ಸಮಾಜದಲ್ಲಿ ಪ್ರೀತಿ ವಿಶ್ವಾಸದಿಂದ ಕಾಣಬೇಕು, ಅವರನ್ನು ಊರಿನಿಂದ ಹೊರಗೆ ಹಾಕುವುದು ಕಾನೂನು ಬಾಹಿರ ಅವರಿಗೆ ಕಠಿಣ ಶಿಕ್ಷೆ ಇದೆ ಎಂದು ತಿಳಿಸಿದರು.
ನಂತರ ಸೌಹಾರ್ದ ಸಾಂಸ್ಕೃತಿಕ ಕಲಾ ಸಂಘ ಹನಿಯಂಬಾಡಿ ಇವರ ವತಿಯಿಂದ ಹಾಡುಗಳು, ನೃತ್ಯ, ಬೀದಿ ನಾಟಕದ ಮೂಲಕ ಹೆಚ್ಐವಿ ಏಡ್ಸ್ ಹೇಗೆ ಹರಡುತ್ತದೆ ಹೇಗೆ ತಡೆಗಟ್ಟಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮನಮುಟ್ಟುವಂತೆ ಜಾಗೃತಿ ಮೂಡಿಸಲಾಯಿತು.
ವೇದಿಕೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಎಚ್ ವಿ ಮೋನಿಕಾ, ಸೌಹಾರ್ದ ಸಾಂಸ್ಕೃತಿಕ ಕಲಾಸಂಘದ ನಾಯಕ ಎನ್ ಶೇಖರ್, ಯರಳ್ಳಿ ಹೊನ್ನೇಶ್, ಹೆಚ್ ಬಿ ರಾಮಕೃಷ್ಣ, ದೇವೇಗೌಡ, ವೈ ಸಿ ಕುಮಾರ್, ಬನ್ನೂರು ಅನುಸೂಯ ಸೇರಿದಂತೆ ಆಶಾ ಕಾರ್ಯಕರ್ತರು ಇದ್ದರು.