ಕಳೆದ 7 ತಿಂಗಳುಗಳ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು, ಕ್ರಿಮಿನಲ್ ಪ್ರಕರಣಗಳು ಮರುಕಳಿಸುತ್ತಿದ್ದು, ರಾಜ್ಯದ ದಲಿತರು, ಹೆಣ್ಣು ಮಕ್ಕಳು ಮತ್ತು ನಾಗರಿಕರಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಈದ್ ಮಿಲಾದ್ ಹಬ್ಬದಂದು ಶಿವಮೊಗ್ಗದಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂರು ಹಿಂದೂಗಳ ಮೇಲೆ ಹಲ್ಲೆ ನಡೆಸಿ ಅಶಾಂತಿ ಸೃಷ್ಠಿಸಿದರು. ಈ ಸಂಬಂಧ ಆರೋಪಿಗಳನ್ನು ಕಾನೂನು ರೀತಿಯ ಶಿಕ್ಷೆಗೊಳಪಡಿಸದೇ ಸರ್ಕಾರ ರಕ್ಷಣೆ ನೀಡಿದ್ದು, ಖಂಡನಾರ್ಹ ಎಂದು ದೂರಿದರು. ಭದ್ರಾವತಿ ಶಾಸಕ ಸಂಗಮೇಶ್ ಬೆಂಬಲಿಗರು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಸರಿಯಾದ ಕ್ರಮವೇ ಎಂದು ಪ್ರಶ್ನಿಸಿದ್ದಾರೆ.
ಹೆಲ್ಮಟ್ ಧರಿಸದ ಕಾರಣಕ್ಕೆ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿ ಕೌರ್ಯ ಮೆರೆದಿದ್ದಾರೆ. ಕೋಲಾರದಲ್ಲಿ ನಡೆದ ಮುಸ್ಲಿಂ ಕಾರ್ಯಕ್ರಮದಲ್ಲಿ ಖಡ್ಗ ಝಳಪಿಸುವ ಮೂಲಕ ಹಿಂದೂಗಳಿಗೆ ಜೀವ ಭಯವೊಡ್ಡಲಾಗಿದೆ. ಇಂತಹ ಶಕ್ತಿಗಳನ್ನು ಧಮನ ಮಾಡಬೇಕಿದ್ದ ಸರ್ಕಾರ ಮತಕ್ಕಾಗಿ ಮುಸ್ಲಿಂರ ಓಲೈಕೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸತ್ ಕಲಾಪಕ್ಕೆ ಪದೇ ಪದೇ ಅಡ್ಡಪಡಿಸುವ ಮೂಲಕ ಸ್ಪೀಕರ್ ತನಿಖೆಗೆ ಅವಮಾನವೆಸಗಿ ಸಂಸತ್ತಿನ ಘನತೆಯನ್ನು ವಿರೋಧ ಪಕ್ಷದ ಸಂಸದರು ಗಾಳಿಗೆ ತೂರಿದ್ದಾರೆ. ಮಹಿಳಾ ಮೀಸಲಾತಿ ಜಾರಿ ಪ್ರಯತ್ನ, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ದಿಗೆ ಪೂರಕವಾಗುವ ಮಸೂದೆಗಳನ್ನು ಜಾರಿಗೊಳಿಸಲು ಅಡ್ಡಿಪಡಿಸಿ ಉಪ ರಾಷ್ಟ್ರಪತಿಯವರನ್ನು ಅಣಕಿಸುವ ಪ್ರವೃತಿ ತೋರಿರುವ ವಿಪಕ್ಷ ಸಂಸದರ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ರಾಜ್ಯದ ಕಾನೂನು ಸುವ್ಯವಸ್ಥೆ ಸರಿಪಡಿಸಿ ಅಮಾಯಕರ ಮೇಲೆ ನಡೆಯುತ್ತಿರುವ ಹಲ್ಲೆ, ಅತ್ಯಾಚಾರ ಯತ್ನವನ್ನು ಹತ್ತಿಕ್ಕದಿದ್ದಾರೆ, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಗೋಷ್ಠಿಯಲ್ಲಿ ಮುಖಂಡರಾದ ಮುನಿರಾಜು, ವಸಂತಕುಮಾರ್, ಶ್ರೀಧರ್, ಸಿ.ಟಿ.ಮಂಜುನಾಥ, ನಾಗಾನಂದ್ ಉಪಸ್ಥಿತರಿದ್ದರು.