ತಂಬಾಕು ಸೇವನೆ ಯಿಂದ ಉಂಟಾಗುವ ದುಷ್ಪರಿಣಾಮ ಗಳ ಬಗ್ಗೆ ಅರಿವು ಮೂಡಿಸಿ ಜಿಲ್ಲೆಯನ್ನು ತಂಬಾಕು ಮತ್ತು ಹುಕ್ಕಾ ಮುಕ್ತ ವಲಯ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್ ಅವರು ತಿಳಿಸಿದರು.
ತಂಬಾಕು ಮಾರಾಟ ಮಾಡುವ ಪ್ರದೇಶಗಳಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಕಟ್ಟು ನಿಟ್ಟಿನ ಸರ್ಕಾರದ ನಿರ್ದೇಶನಗಳು ಪಾಲನೆ ಆಗಬೇಕು. ಇಲ್ಲವಾದಲ್ಲಿ ದಂಡವಿಧಿಸಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕ ಅರಸೀಕೆರೆ ಗ್ರಾಮ, ಪಾಂಡವಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ, ಮೇಲುಕೋಟೆ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ ಗಳಲ್ಲಿ ತಂಬಾಕು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈಗಾಗಲೇ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ತಂಬಾಕು,ಹುಕ್ಕಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ತಂಬಾಕು ಮುಕ್ತ ವಲಯ ಮಾಡುವುದಕ್ಕೆ ಪ್ರೇರೇಪಿಸಲಾಗಿದೆ.
ಶಿಕ್ಷಣ, ನಗರಾಭಿವೃದ್ಧಿ, ಪಂಚಾಯತ್ ರಾಜ್, ಸಾರಿಗೆ ಇಲಾಖೆ ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಲಾಖೆಯ ಜೊತೆಗೆ ಕೈ ಜೋಡಿಸಿ ಕೋಟ್ಪಾ ಕಾರ್ಯಾಚರಣೆ ಹಮ್ಮಿಕೊಳ್ಳಬೇಕು ಎಂದರು.
ಕೋಟ್ಪಾ ಕಾಯಿದೆಯಡಿ ಏಪ್ರಿಲ್ 2023 ರಿಂದ ಜನವರಿ 2024 ರವರೆಗೆ 75 ದಾಳಿ 1,20,360 ದಂಡ ಸಂಗ್ರಹಿಸಲಾಗಿದೆ.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೆಲವು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತಂಬಾಕು ನಿಯಂತ್ರಣ ವಿಷಯ ಕುರಿತು ಸಭೆಯಲ್ಲಿ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ ಮೋಹನ್, ಸರ್ವೇಕ್ಷಣಾಧಿಕಾರಿ ಡಾ ಕುಮಾರ್, ಡಿ.ಡಿ.ಪಿ.ಐ ಶಿವರಾಮೇಗೌಡ, ನಾಗಮಂಗಲ ಡಿ, ವೈ, ಎಸ್, ಪಿ ಸುನೀಲ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ, ದಂತವೈದ್ಯ ಡಾ. ಅರುಣಾನಂದ ಜಿಲ್ಲಾ ಸಂಯೋಜಕ ತಿಮ್ಮರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು