ಆಧುನಿಕತೆ ಹೆಚ್ಚಾಗುತ್ತಿದ್ದಂತೆ ವೈಜ್ಞಾನಿಕ ಆಲೋಚನೆಗಳು ಹೆಚ್ಚಾಗುತ್ತವೆ, ಹಿಂದೆ ಅನ್ನದಾನ ಶ್ರೇಷ್ಠ ಎನ್ನುತ್ತಿದ್ದ ಕಲಾಮಾನ ದೂರವಾಗಿ, ನೇತ್ರದಾನ, ರಕ್ತದಾನವೇ ಶ್ರೇಷ್ಠ ಎಂಬ ಸ್ಥಾನ ಪಡೆಯುತ್ತಿವೆ, ಮಾನವೀಯ ಮೌಲ್ಯಗಳು ಯುವಜನತೆಯಲ್ಲಿ ದಾನದ ರೂಪ ಪಡೆಯುತ್ತಿವೆ ಎಂದು ತಹಶೀಲ್ದಾರ್ ಕುಂಇ ಅಹಮದ್ ಹೇಳಿದರು.
ಮಂಡ್ಯ ನಗರದ ಮಾಂಡವ್ಯ ಬಿ.ಎಡ್ ಕಾಲೇಜು ಆವರಣದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೃಷಿಕ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಆಂಗವಾಗಿ ಸ್ವಯಂ ಪ್ರೇರಿತ ರಕ್ತದಾನ-ರಕ್ತದಾನಿಗಳಿಗೆ ಅಭಿನಂದನಾ ಸಮಾರಂಭಕ್ಕೆ ಗಣ್ಯರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನದಿಂದ ಜೀವ ಉಳಿಸುವ ಕೆಲಸವಾಗುತ್ತದೆ, ಇದನ್ನು ಆರೋಗ್ಯವಂತ ಯುವ ಜನರು ತಮ್ಮ ಜೀವನದಲ್ಲಿ ನಿರಂತರವಾಗಿ ಪಾಲಿಸಿಕೊಂಡು ಬರಬೇಕೆಂದು ತಿಳಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ, ರಕ್ತಕ್ಕೆ ರಕ್ತವೇ ಔಷಧ, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಇಂದು ರಾಷ್ಟಾದ್ಯಂತ ಸಂಘ ಸಂಸ್ಥೆಗಳು-ರಕ್ತದಾನಿಗಳು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಆಚರಿಸುವ ಮೂಲಕ ರಕ್ತದಾನ ಮಾಡಲಾಗುತ್ತಿದೆ ಎಂದು ಪ್ರಶಂಸಿಸಿದರು.
ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ನಿಜವಾದ ದೈವಿಸ್ವರೂಪಿಗಳು ರಕ್ತದಾನಿಗಳು, ಸುಮಾರು ವಾರ್ಷಿಕವಾಗಿ 5-6 ಬಾರಿ ರಕ್ತದಾನ ಮಾಡಿ ಸಾಕಷ್ಟು ಜೀವಗಳಿಗೆ ನೆರವಾಗಿದ್ದಾರೆ. ಇಂತಹ ಮಾನವೀಯತೆಯುಳ್ಳ ರಕ್ತದಾನಿಗಳನ್ನು ಸ್ಮರಿಸಲು ರಾಷ್ಟ್ರೀಯ ರಕ್ತದಾನಿಗಳ ದಿನ ಆಚರಿಸಲಾಗುತ್ತಿದೆ,
ಭಾರತದೇಶದಲ್ಲಿ ರಕ್ತದ ಕೊರತೆ ನೀಗಿಸುತ್ತಿರುವುದು ಸ್ಥಳೀಯ ರಕ್ತದಾನಿಗಳು, ರಕ್ತದಾನಿಗಳೇ ಇಲ್ಲದಿದ್ದರೆ ಅಪಾರ ಪ್ರಮಾಣದಲ್ಲಿ ಜೀವಗಳು ಪ್ರಾಣ ಕಳೆದುಕೊಳ್ಳುತ್ತವೆ, ರಕ್ತದಾನಿಗಳನ್ನು ಗೌರವಿಸಿ, ಅಭಿನಂದಿಸುವ ಕಾರ್ಯವು ನಡೆಯುವುದು ಸೂಕ್ತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಅನಿಲ್ಕುಮಾರ್, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಎಸ್.ಶಿವಕುಮಾರ್, ರಕ್ತನಿಧಿ ಕೇಂದ್ರ ಮುಖ್ಯಸ್ಥ ಡಾ.ಮುರಳಿಧರ್ ಭಟ್, ರಕ್ತದಾನಿಗಳಾದ ಮಂಜುನಾಥ್ ಕಮ್ಮನಾಯಕನಹಳ್ಳಿ, ತಗ್ಗಹಳ್ಳಿ ರಘು, ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್ಕುಮಾರ್, ರೆಡ್ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕರು ಹಾಜರಿದ್ದರು.