ಸಮಾಜದಲ್ಲಿ ಯಾವುದೇ ಸಮುದಾಯವು ಶಿಕ್ಷಣದಲ್ಲಿ ಹಿಂದುಳಿದರೆ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ, ಹಾಗಾಗಿ ಹಿಂದುಳಿದ ವರ್ಗಗಳು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅಭಿವೃದ್ದಿ ಸಾಧಿಸಬೇಕು ಎಂದು ಸಮಾಜ ಸೇವಕ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅವರು ಸಲಹೆ ನೀಡಿದರು. ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿ, ಕಾಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯಕ್ಕೆ ಧಕ್ಕೆ ಉಂಟಾದಾಗ, ಸಂಘಗಳು ಅದರ ವಿರುದ್ಧ ಹೋರಾಡಿ ನ್ಯಾಯ ಕೊಡಿಸುವ ಮೂಲಕ ತಮ್ಮ ಸಂಘಕ್ಕೆ ಉತ್ತಮ ಹೆಸರು ತರಬೇಕು. ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಿ, ಸಂಘಟನೆಯನ್ನು ಬಲಪಡಿಸಬೇಕು.ನಂತರ ಹೋರಾಟ ನಡೆಸಿ ಸಮುದಾಯಕ್ಕೆ ಸಂಘವು ಶಕ್ತಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಸಹಕಾರ ತತ್ವದ ಅಡಿಯಲ್ಲಿ ಸಂಘಗಳು ಸ್ಥಾಪನೆಯಾಗಬೇಕು. ಸಂಘಗಳಲ್ಲಿ ಉದ್ಭವಿಸುವ ಘರ್ಷಣೆಗೆ ಅವಕಾಶ ನೀಡಬಾರದು.ಯಾವುದೇ ಗ್ರಾಮದಲ್ಲಿ ಹಲವಾರು ಸಮುದಾಯಗಳು ಇರುತ್ತವೆ.ಆದ್ದರಿಂದ ಎಲ್ಲಾ ಸಮುದಾಯಗಳು ಸಹಬಾಳ್ವೆಯಿಂದ ಸೌಹಾರ್ದಯುತವಾಗಿ ಹಳ್ಳಿಗಳಲ್ಲಿ ಜೀವನ ನಡೆಸುವಂತೆ ಸಂಘಗಳು ಸಹಕರಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಸಹ ಕಾರ್ಯದರ್ಶಿ ಯತೀಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹೊಸೂರು ನಿಂಗೇಗೌಡ, ತಾಲ್ಲೂಕು ಯುವ ಕುರುಬರ ಸಂಘದ ಕಾರ್ಯಾಧ್ಯಕ್ಷ ಚೌಡೇನಹಳ್ಳಿ ಜೆಸಿಬಿ ರವಿ, ಟೌನ್ ಘಟಕದ ಅಧ್ಯಕ್ಷ ಸತೀಶ್, ಕಾಮನಹಳ್ಳಿ ಘಟಕದ ನೂತನ ಅಧ್ಯಕ್ಷ ಗಿರೀಗೌಡ, ಉಪಾಧ್ಯಕ್ಷ ಸತೀಶ್, ದೇವೇಗೌಡ, ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಅಶೋಕ್, ಗ್ರಾ.ಪಂ.ಸದಸ್ಯ ಯಜಮಾನ ಮಂಜುನಾಥ್, ಮಾಜಿ ಸದಸ್ಯ ಅಶೋಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವರದರಾಜು, ಬಾಣೇಗೌಡ, ಸಂಘಟನಾ ಕಾರ್ಯದರ್ಶಿ ಬೀರೇಶ್,ಉಪಾಧ್ಯಕ್ಷ ರಾಮನಹಳ್ಳಿ ಕುಮಾರ್,ದಿಲೀಪ್, ಯೋಗೇಶ್, ಜವರೇಗೌಡ, ಶಿವರಾಜು ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.