ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ 2ನೇ ತರಗತಿ ಓದುತ್ತಿರುವ ಎಂ. ಮಾದೇಶ್ ಎಂಬ ಪುಟ್ಟ ಪೋರ ಅಸಮಾನ್ಯ ಸಾಧನೆ ಮಾಡಿದ್ದಾನೆ.
ಕೇವಲ 7 ನೇ ವಯಸ್ಸಿನಲ್ಲಿಯೇ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಾಂಪಿಯನ್ ಟ್ರೋಫಿ, ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಮಳವಳ್ಳಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾನೆ.
ಮಳವಳ್ಳಿ ಪಟ್ಟಣದ ಸಮಾಜದ ಸೇವಕ ಮಹೇಶ್ ನಾಯಕ್ ಅವರ ಪುತ್ರ ವೆಸ್ಟ್ ಹ್ಯಾಂಡ್ ಕಾನ್ವೆಂಟ್ನಲ್ಲಿ 2ನೇ ತರಗತಿ ಓದುತ್ತಿರುವ ಮಾದೇಶ್ ಜೆನ್ ಮಾರ್ಷಲ್ ಆರ್ಟ್ ಕರಾಟೆ ಸ್ಕೂಲ್ನಲ್ಲಿ ತರಬೇತುದಾರ ಶಿವು ಅವರಿಂದ ತರಬೇತಿ ಪಡೆದು 25ಕ್ಕೂ ಹೆಚ್ಚು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಕರಾಟೆ ಪ್ರೋತ್ಸಾಹಿಸುವಂತೆ ಇತರೆ ಪೋಷಕರಿಗೆ ಸ್ಪೂರ್ತಿ ತುಂಬಿದ್ದಾನೆ.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ತಮಿಳುನಾಡು, ಚನ್ನೈ, ಕೊಡೇಕನಲ್, ಕೊಯಂಬತ್ತೂರು ಸೇರಿದಂತೆ ಹಲವು ರಾಜ್ಯ ಸೇರಿದಂತೆ ದೇಶ- ವಿದೇಶಗಳಲ್ಲಿ ಕರಾಟೆ ಪ್ರತಿಭೆ ಪ್ರದರ್ಶಿಸಿದ್ದಾನೆ.
ಶಿವಮೊಗ್ಗದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಬಲಿಷ್ಠ 7 ದೇಶಗಳ ಕರಾಟೆ ಪಟುವನ್ನು ಸೋಲಿಸುವುದರ ಮೂಲಕ ಚಿನ್ನದ ಪದಕ ಗೆದ್ದಿದ್ದಾನೆ.
ಎಲೆಮರೆಯ ಕಾಯಂತೆ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆ ಮಾದೇಶನಿಗೆ ತಾಲ್ಲೂಕು ಮತ್ತು ಜಿಲ್ಲಾಡಳಿತ ಪ್ರೋತ್ಸಾಹಿಸುವುದರ ಮೂಲಕ ಗ್ರಾಮೀಣ ಕ್ರೀಡಾಪಟುವಿಗೆ ಉತ್ಸಾಹ ತುಂಬಬೇಕೆಂಬುವುದು ಪ್ರತಿಯೊಬ್ಬರ ಅಶಯವಾಗಿದೆ.
2ನೇ ತರಗತಿ ಓದುತ್ತಿರುವ ಮಾದೇಶ್ ತಮ್ಮ ಪ್ರತಿಭೆಯ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಹಲವು ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯ. ಇನ್ನೂ ಹೆಚ್ಚಿನ ತರಬೇತಿ ನೀಡಿ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡಲಾಗುವುದೆಂದು ಕರಾಟೆ ತರಬೇತಿದಾರ ಶಿವು ತಿಳಿಸಿದರು.
ಎಷ್ಟೇ ಕಷ್ಟವಾದರೂ ಕೂಡ ತಮ್ಮ ಮಗನಿಗೆ ಉತ್ತಮ ತರಬೇತಿ ಕೊಡಿಸಲಾಗುವುದು. ಶಾಲಾ ಶಿಕ್ಷಕರ ಜೊತೆಗೆ ಸಾರ್ವಜನಿಕರು ನನ್ನ ಮಗ ಮಾದೇಶನಿಗೆ ಪ್ರೋತ್ಸಾಹಿಸಬೇಕೆಂದು ಮಹೇಶ್ ನಾಯಕ್ ಮನವಿ ಮಾಡಿದರು.