ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧವಾಗಿದ್ದು ಸ್ವಂತ ಬಲದ ಆಧಾರದ ಮೇಲೆ ರಾಜ್ಯವನ್ನು ಮುನ್ನಡೆಸಲಿದೆ ಎಂದರು. ಇದಕ್ಕೆ ಪೂರಕವಾಗಿ ರಾಜ್ಯದ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬದಿಗೆಟ್ಟು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಬಲಪಡಿಸಲಿದ್ದಾರೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.
ಮನೆ ಮನೆಗಳಿಗೆ ತಮ್ಮ ಕಾರ್ಯಕರ್ತರ ಜೊತೆ ತೆರಳಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಪಕ್ಷವು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ವಿಶೇಷವಾಗಿ ರೂಪಿಸಿರುವ ಪಂಚರತ್ನ ಯೋಜನೆಗಳ ಕುರಿತ ಸವಿವರವಾದ ಮಾಹಿತಿಯ ಕರ ಪತ್ರವನ್ನು ತಂಡಸನಹಳ್ಳಿಯ ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿದರು.
ತಂಡಸನಹಳ್ಳಿಯ ಗ್ರಾಮಸ್ಥರು ಜೆಡಿಎಸ್ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಬೆಂಬಲಿಸಿ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳಿಸುವುದರ ಮೂಲಕ ರಾಜ್ಯದ ಅಭಿವೃದ್ಧಿಗೆ ಹಾಗೂ ಜಿಲ್ಲೆಯ ಪ್ರಗತಿಗೆ ಕಾರಣರಾಗಬೇಕು. ಅಖಂಡ ಭ್ರಷ್ಟತೆಯಿಂದ ಕೂಡಿರುವ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ ಅವರು, ರಾಜ್ಯದಲ್ಲಿ ಆಡಳಿತ ಸತ್ತುಹೋಗಿದೆ, ಎಲ್ಲಾ ಕೆಲಸ ಕಾರ್ಯಗಳು ಪರ್ಸೆಂಟೇಜ್ ಆಧಾರದ ಮೇಲೆ ನಡೆಯುತ್ತಿದ್ದು ಈ ಬೆಳವಣಿಗೆಯನ್ನು ಕಂಡ ರಾಜ್ಯದ ಜನತೆ ರೋಸಿ ಹೋಗಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಪಕ್ಷ ಅಧಿಕಾರ ಕಳಿಸುವುದು ಶತಸಿದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮರ್ಥ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು ಮಂಡ್ಯ ಜಿಲ್ಲೆಯ ಪ್ರಗತಿಗೆ ಬದ್ಧವಾಗಿದ್ದು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ನ ವಿಜಯ ಪತಾಕೆ ಹಾರಿಸುವ ಸಲುವಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮನೆ ಮನೆಗೆ ತೆರಳಿ ಗ್ರಾಮಸ್ಥರ ಮನವೊಲಿಸಿ ಅತ್ಯಧಿಕ ಮತಗಳಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು .
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಟಿ.ಸಿ ಶಂಕರಗೌಡ , ಕಲ್ಪನಾ ಬಿ.ಆರ್ ರಾಮಚಂದ್ರ, ಗ್ರಾಮ ಪಂಚಾಯತಿ ಸದಸ್ಯರಾದ ಜಯಮ್ಮ, ನಿರ್ಮಲ, ಪವಿತ್ರ , ಮಮತಾ ಮುಖಂಡರಾದ ಬಿ.ಆರ್.ಸುರೇಶ್, ನವೀನ್, ಮೋಹನ್ , ಹೇಮಂತ್, ರಾಘು, ಮಹೇಶ್ ಇನ್ನಿತರರಿದ್ದರು.