ಯಾವುದೇ ಕಾರಣಕ್ಕೂ ಜಾ.ದಳಕ್ಕೆ ರಾಜೀನಾಮೆ ನೀಡುವಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜಾ.ದಳ ಟಿಕೆಟ್ ಆಕಾಂಕ್ಷಿ ತಗ್ಗಹಳ್ಳಿ ವೆಂಕಟೇಶ್ ಜಾ.ದಳ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಜಾ.ದಳ ಮುಖಂಡರು ಜಾ.ದಳ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬರುತ್ತಿದ್ದಾರೆ. ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ಹೊಸೂರು ರಮೇಶ, ಎಲ್.ಕೆ.ಸ್ವಾಮಿಗೌಡ, ರೈತ ಘಟಕದ ರವಿ, ಗೌಡಹಳ್ಳಿ ದೇವರಾಜ ರಾಜೀನಾಮೆ ನೀಡಿರುವುದು ಮನಸ್ಸಿಗೆ ನೋವು ತರುವ ವಿಚಾರವಾಗಿದೆ ಎಂದರು.
40 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿರುವವರು, ಈಗ ಪಕ್ಷದಿಂದ ದೂರವಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಕ್ಷೇತ್ರದ ಶಾಸಕರು, ಜಿಲ್ಲಾಧ್ಯಕ್ಷರ ನಡವಳಿಕೆಯಿಂದ ಪಕ್ಷವನ್ನು ತ್ಯಜಿಸುತ್ತಿದ್ದಾರೆ. ಆದರೆ ಕಾರ್ಯಕರ್ತರು ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಧೃತಿಗೆಡಬಾರದು. ನೀವು ನನಗೆ ಶಕ್ತಿ ತುಂಬಿ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ನುಡಿದರು.
ಕೊಡಿಯಾಲದಲ್ಲಿ ನಾಳೆ ಸಭೆ
ಮಾ.5ರಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊಡಿಯಾಲ ಗ್ರಾಮದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆಯಲಾಗಿದ್ದು, ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಮುರುಳಿ, ಗ್ರಾ.ಪಂ.ಸದಸ್ಯ ಲಿಂಗಣ್ಣ, ಸಿದ್ದರಾಜು, ಸಿದ್ದೇಗೌಡ, ವೆಂಕಟೇಶ್, ಪುಟ್ಟೇಗೌಡ ಇತರರಿದ್ದರು.