ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಜೈನ ಸಮುದಾಯದ ವತಿಯಿಂದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಖಂಡಿಸಿ ಬೆಳ್ಳೂರು ಹಾಗೂ ದಡಗ ಗ್ರಾಮದ 300ಕ್ಕೂ ಹೆಚ್ಚು ಜೈನ ಸಮುದಾಯದವರು ಬೆಳ್ಳೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೌನ ಪ್ರತಿಭಟನೆ ನಡೆಸಿ ನಾಡಕಚೇರಿಯ ಉಪ ತಹಶೀಲ್ದಾರ ಸ್ವಾಮಿಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು
ವಿಮಲನಾಥ ಟ್ರಸ್ಟ್ ಬೋರ್ಡ್ ಕಮಿಟಿಯ ಅಧ್ಯಕ್ಷ ಬಿ ಪದ್ಮನಾಭ ಮಾತನಾಡಿ, ಹತ್ಯೆಗೊಳಗಾದ ಸ್ವಾಮೀಜಿಗಳು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದರು. ಅವರನ್ನು ಜು.07ರಂದು ಬರ್ಬರವಾಗಿ ಹತ್ಯೆ ಮಾಡಿರುವುದರಿಂದ ಜೈನ ಸಮಾಜಕ್ಕೆ ಆಘಾತ ಉಂಟಾಗಿದೆ ಎಂದರು.
ಕಂಬದಹಳ್ಳಿ ಜೈನ ಮಠದ ಭಾನು ಕೀರ್ತಿ ಭಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಅಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪ್ರಿಯರು ಆಗಿರುವ ಜೈನ ಮುನಿಗಳ ಮೇಲೆ ಇಂತಹ ಕೃತ್ಯಗಳನ್ನು ಮರುಕಳಿಸದಂತೆ ರಕ್ಷಣೆ ನೀಡಬೇಕು. ಜೈನ ಬಸದಿಗಳು, ಮಠಗಳು, ಮುನಿಗಳು, ಸಾಧು ಸಂತರು, ಮಾತಾಜಿಯವರು ಮತ್ತು ಅವರ ವಾಸ್ತವ್ಯವಿರುವ ಆಶ್ರಮ ಹಾಗೂ ಇತರೆ ಜಾಗಗಳಲ್ಲಿ ಮತ್ತು ಅವರು ವಿಹಾರ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಭದ್ರತಾ ಕ್ರಮಗಳನ್ನು ಕರ್ನಾಟಕ ಸರ್ಕಾರವು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಮಿಟಿಯ ಗೌರವಾಧ್ಯಕ್ಷ ಡಾ.ರತ್ನರಾಜು, ಕಾರ್ಯದರ್ಶಿ ಬಿ.ಎಸ್. ಸುನಿಲಕುಮಾರ, ಸದಸ್ಯರಾದ ಧರಣೇಂದ್ರ ಕುಮಾರ, ಧನ್ಯಕುಮಾರ, ಮಹಾವೀರ್, ಸುನಿಲ್ ಕುಮಾರ್, ಸಂಜಯ, ರೋಹಿತ, ನರೇಶಕುಮಾರ, ಅಜಿತ್ ಕುಮಾರ, ಸಮರ್ಥ, ಕುಂತಲ ಮತ್ತಿತರರಿದ್ದರು.