ಇತ್ತಿಚೇಗೆ ನಿಧನರಾದ ಜಲ ಸಂತ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಮಂಡ್ಯನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಕಾಮೇಗೌಡರು ಜೀವಿತಾವಧಿಯಲ್ಲಿ ಕುರಿಗಾಹಿಯಾಗಿ ಪರಿಸರ, ಪ್ರಕೃತಿ ಬಗ್ಗೆ ಕಾಳಜಿವಹಿಸಿ, ತನ್ನ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕುಂದನಿ ಬೆಟ್ಟಗಳ ಮೇಲೆ ಸಸಿ ನೆಟ್ಟು ಸಂರಕ್ಷಣೆ ಮಾಡಿ, ಸುಮಾರು 15 ಕಟ್ಟೆಗಳನ್ನು ನಿರ್ಮಿಸಿ ಜನ, ಜಾನುವಾರು ಹಕ್ಕಿ ಪಕ್ಷಿಗಳ ನೀರಿನ ದಾಹ ತಣಿಸುತ್ತಿದ್ದರು, ಅವರ ಕುಟುಂಬಕ್ಕೆ ಜಿಲ್ಲಾಡಳಿತ ನೆರವಾಗಬೇಕೆಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರ ಸೇವೆಯನ್ನು ಗುರುತಿಸಿ ಅಭಿನಂದನಾ ನುಡಿ ಆಡಿದ್ದು ವಿಶೇಷವಾಗಿತ್ತು, ಕಾಮೇಗೌಡರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ಕೂಡ ಸಿಕ್ಕಿತ್ತು, ಆದರೆ ಅವರು ಬದುಕಿದ್ದಾಗ ಸರಕಾರ ಅಥವಾ ಜಿಲ್ಲಾಡಳಿತ ಅವರ ಕುಟುಂಬದ ರಕ್ಷಣೆಗೆ ನಿಲ್ಲಲಿಲ್ಲ ಎಂದು ದೂರಿದರು.
ತ್ವರತಗತಿಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲು ಆಗ್ರಹ
ಇತ್ತೀಚೆಗೆ ಮಳವಳ್ಳಿ ಪಟ್ಟಣದಲ್ಲಿ ಅತ್ಯಾಚಾರಕ್ಕೆ ಒಳಪಟ್ಟು ಕೊಲೆ ಆದ ಬಾಲಕಿ ಕು. ದಿವ್ಯ ಕೊಲೆ ಆರೋಪಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ತ್ವರಿತವಾಗಿ ಚಾರ್ಜ್ಶೀಟ್ ಸಲ್ಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಬೋರಾಪುರ ಶಂಕರೇಗೌಡ, ಸುನಂದ ಜಯರಾಂ, ಪ್ರೊ.ಸಿ.ಪ್ರಕಾಶ್, ಡಿ.ಎನ್.ಲಿಂಗೇಗೌಡ, ಕೆಂಪೇಗೌಡ, ವಿ.ಸಿ.ಉಮೇಶ್, ಸುರೇಶ್ ನಾಗಮಂಗಲ ಹಾಗೂ ಶಿವರಾಮು ಮತ್ತಿತರರು ಭಾಗವಹಿಸಿದ್ದರು.