ಇತ್ತೀಚಿಗೆ ನಿಧನರಾದ ಕಾರಸವಾಡಿ ಮಹದೇವು ಅವರ ಪುತ್ರ ಕೆ.ಎಂ.ಹರ್ಷ ಅವರ ಹೆಸರಿನಲ್ಲಿ ಸಮಾಜ ಸೇವಾ ಪ್ರತಿಷ್ಠಾನ ಸ್ಥಾಪಿಸಲಾಗಿದ್ದು, ಪ್ರತಿಷ್ಠಾನದ ಉದ್ಘಾಟನೆಯು ನ.4 ಅಧಿಕೃತವಾಗಿ ನೆರವೇರಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಡಿ.ದೇವರಾಜ್ ಕೊಪ್ಪ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ಉದ್ಘಾಟನೆಯನ್ನು ಹರ್ಷ ಅವರ ಉತ್ತರ ಕ್ರಿಯಾದಿ ದಿನದಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು ನೆರವೇರಿಸುವರು. ಫೆವಾರ್ಡ್ಕೆ ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕ ಅಶೋಕ್ ಎಸ್.ಡಿ.ಜಯರಾಮ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಭಾಗವಹಿಸುವರು ಎಂದರು.
ಅಂದು ಸುಮಾರು 100 ಮಂದಿ ನೇತ್ರದಾನಿಗಳ ನೋಂದಣಿ, ವಿದ್ಯಾರ್ಥಿಗಳಿಗೆ ಪರಿಸರ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ನೀತಿ ಕಥೆ, ಕಾನೂನಿಗೆ ಸಂಬಂಧಿಸಿದ 1,500 ಪುಸ್ತಕಗಳ ವಿತರಣೆ, 300 ವಿದ್ಯಾರ್ಥಿಗಳಿಗೆ ಕನ್ನಡ ಕಾಫಿ ರೈಟಿಂಗ್, ನೋಟ್ ಪುಸ್ತಕ ವಿತರಣೆ ಮತ್ತು ಸಂತೆಕಸಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ನಡೆಯಲಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಮಮತೆಯ ಮಡಿಲು ವತಿಯಿಂದ ಆ ದಿನ ಮೂರು ಹೊತ್ತು ಊಟದ ವ್ಯವಸ್ಥೆ ಮತ್ತು ವಿಕಸನ ಸಂಸ್ಥೆಯ ಜೋಗುಳದ ಮಕ್ಕಳಿಗೆ ಊಟ ವಿತರಣೆ ನಡೆಯಲಿದೆ. ಪ್ರತಿ ವರ್ಷ ಪ್ರತಿಷ್ಠಾನವು ಹರ್ಷ ಅವರ ಪುಣ್ಯ ಸ್ಮರಣೆ ಅಂಗವಾಗಿ ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾರ್ಗದರ್ಶನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಸಂಚಾಲಕರಾದ ಧನಂಜಯ ಪಣ್ಣೇದೊಡ್ಡಿ, ಮಂಜೇಶ್ ಗೌಡ ನಾಗಮಂಗಲ, ಜೆ.ಕೆ.ಬಸರಾಜು, ಗೊರವಾಲೆ ಚಂದ್ರಶೇಖರ್, ವಾಗೀಶ್ ಚಂದ್ರಗುರು, ಕೋ.ಪು.ಗುಣಶೇಖರ್ ಮತ್ತಿತರರಿದ್ದರು.