ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಅನಾಗರಿಕನಂತೆ ಮಾತನಾಡಿರುವ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜಿಲ್ಲೆಯ ದಳಪತಿಗಳು ವಾಗ್ದಾಳಿ ನಡೆಸಿದ್ದಾರೆ.
ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಪ್ರಧಾನಿಯಾಗಿ ದೇಶವನ್ನು ಮನ್ನೆಡೆಸಿದ ದೇವೇಗೌಡರ ಬಗ್ಗೆ ರಾಜಣ್ಣ ಕೀಳು ಭಾಷೆಯಲ್ಲಿ ಮಾತನಾಡಿದ್ದಾರೆ. ಒಂದಲ್ಲ ಒಂದು ದಿನ ನಾನು ಸೇರಿದಂತೆ ರಾಜಣ್ಣ ಎಲ್ಲರೂ ಸಾವನ್ನಪ್ಪಬೇಕು. ಆದರೆ ರಾಜಣ್ಣನವರು ದೇವೇಗೌಡರು ಇಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಾರೆ. ಇನ್ನು ಕೆಲ ದಿನಗಳಲ್ಲಿ ನಾಲ್ವರೊಂದಿಗೆ ಹೋಗಬೇಕಾಗುತ್ತದೆ ಎಂದು ಹೇಳಿರುವುದು ಅವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ರಾಜಣ್ಣನವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಇಲ್ಲದಿದ್ದರೆ ನಮ್ಮ ಕಾರ್ಯಕರ್ತರೇ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಮಂಡ್ಯ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಕೆ.ಎನ್. ರಾಜಣ್ಣನವರ ವಿರುದ್ಧ ತೀವ್ರವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಏ ರಾಜಣ್ಣ ನೀನು ಒಂದು ದಿನ ಸಾಯಬೇಕು,ಅವಾಗಲೂ ನಿನ್ನನ್ನು ನಾಲ್ಕು ಜನರೇ ಹೊತ್ತುಕೊಂಡು ಹೋಗುವುದು. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಿನಗೆ ಇದೆಯಾ? ನಿನ್ನಂತಹ ಹುಚ್ಚು ನಾಯಿಗಳಿಗೆ ನಮ್ಮ ಕಾರ್ಯಕರ್ತರು ಮಧುಗಿರಿಯ ಜನರು ಕಲ್ಲು ಹೊಡೆದು ಬುದ್ಧಿ ಕಲಿಸುತ್ತಾರೆ. ಅಮೇದ್ಯ ತಿಂದು ಮಾತನಾಡಿರುವ ನಿನ್ನ ಹೊಲಸು ಬಾಯಿ ಇನ್ನೊಮ್ಮೆ ಬಿಟ್ಟರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಹಲವೆಡೆ ಜೆಡಿಎಸ್ ನಾಯಕರು ರಾಜಣ್ಣ ಅವರ ವಿರುದ್ಧ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದರು.