ಕಳೆದ 13 ವರ್ಷಗಳಿಂದ ಕನ್ನಡ ಸೇನೆ ಸಂಘಟನೆಯು ರೈತರು, ಕಾರ್ಮಿಕರು ಸೇರಿದಂತೆ ಹಲವಾರು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಸೋಮವಾರ ಕನ್ನಡ ಸೇನೆ ವತಿಯಿಂದ ನಡೆದ ಬಿ.ಜಿ.ಪುರ ಹೊರಮಠ ಸ್ವಾಮೀಜಿಗಳಾದ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಹದಿಮೂರು ವರ್ಷಗದ ಕನ್ನಡ ಸೇನೆ ಜನಪರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಮಳವಳ್ಳಿಯಲ್ಲಿ ಕನ್ನಡ ಸೇನೆ ಉದ್ಘಾಟನೆಯಾದ ಸಂದರ್ಭದಲ್ಲಿ ಬಿ.ಜಿ ಪುರದ ಚಂದ್ರಶೇಖರನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ರೈತರ ಬದುಕಿನಲ್ಲಿ ಬೆಳಕು ನೀಡುವ ಹೋರಾಟಕ್ಕೆ ಚಾಲನೆ ನೀಡಿದ್ದರು. ಅವರಿಗೆ ಇಂದು ಕನ್ನಡ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಬಿಜಿಪುರ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರು ಈ ಭಾಗದ ರೈತರ ಮಕ್ಕಳ ಶಿಕ್ಷಣಕ್ಕೆ ಧಾರೆ ಎರೆದಿದ್ದಾರೆ. ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡುತ್ತಿರುವುದು ಬಹಳ ಸಂತೋಷದ ಸಂಗತಿ ಎಂದರು.
ಕನ್ನಡ ಸೇನೆ ಕರ್ನಾಟಕ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯಲು ರೈತರ ಜೊತೆ ಸೇರಿ ಹೋರಾಟ ನಡೆಸಿದೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ಮುಂಚೂಣಿಯಲ್ಲಿತ್ತು. ರೈತರು ಆತ್ಮಹತ್ಯೆಗೆ ಶರಣಾದಾಗ ರೈತ ದೇಶದ ಬೆನ್ನೆಲುಬು ಎಂದು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದೆ. ಮಕ್ಕಳು ವಿಶ್ವಕ್ಕೆ ದೊಡ್ಡ ಸಂಪತ್ತು ಎಂದು ತಿಳಿದು ಹಲವು ಹೋರಾಟಗಳನ್ನು ರೂಪಿಸಿದೆ ಎಂದರು.
ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಿ ಶಿಥಿಲವಾಗಿದ್ದ ಶಾಲಾ ಕಟ್ಟಡ ಸರಿಪಡಿಸುವುದು, ಬಣ್ಣ ಹೊಡೆಯುವ ಕೆಲಸ ಮಾಡುವ ಮೂಲಕ ಪುನಶ್ಚೇತನ ನೀಡಿದೆ. ಕಾಡು ಕೊತ್ತನಹಳ್ಳಿ ಗ್ರಾಮದಲ್ಲಿ ಎರಡು ಶಾಲೆಗಳನ್ನು ಗ್ರಾ.ಪಂ. ಸದಸ್ಯರು, ಪಿಡಿಓ, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದ ಜೊತೆ ಸೇರಿ ಪುನಶ್ಚೇತನ ಗೊಳಿಸಿದೆ ಎಂದು ತಿಳಿಸಿದರು.
ರೈತರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಇಂದು ರೈತರು ಬಹಳ ಕಷ್ಟದಲ್ಲಿದ್ದಾರೆ ,ಅವರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಒಳ್ಳೆಯ ಅಂಕಗಳನ್ನು ಪಡೆದರೆ ಪೋಷಕರಿಗೆ ಕೋಟಿ ರೂ. ಬಹುಮಾನ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸಮವಸ್ತ್ರವನ್ನು ಕನ್ನಡ ಸೇನೆ ವಿತರಿಸುತ್ತಿದೆ ಎಂದರು.
ವೇದಿಕೆಯಲ್ಲಿ ಚಂದ್ರಶೇಖರನಾಥ ಸ್ವಾಮೀಜಿ,ಬಿಜೆಪಿ ನಾಯಕಿ ಲಕ್ಷ್ಮಿ ಅಶ್ವಿನ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ್, ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಮಂಜುನಾಥ್, ಮದ್ದೂರು ತಾಲೂಕು ಅಧ್ಯಕ್ಷ ನಂದೀಶ, ನಗರ ಅಧ್ಯಕ್ಷರಾದ ಸೋಮು ತಮ್ಮೇಗೌಡ ಇದ್ದರು