ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆತ್ತ ತಂದೆ-ತಾಯಿಗೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಮಗನನ್ನು ಕೊಡಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶರತ್(25) ಬಂಧಿತ ಆರೋಪಿ. ಭಾಸ್ಕರ್(61) ಹಾಗೂ ಶಾಂತಾ (60) ದಂಪತಿಯನ್ನು ಸೋಮವಾರ ರಾತ್ರಿ ಹತ್ಯೆ ಮಾಡಿ ಆರೋಪಿ ಮಡಿಕೇರಿಯಲ್ಲಿ ತಲೆಮರೆಸಿಕೊಂಡಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಪರಾರಿಯಾಗಿದ್ದ ಆರೋಪಿಯನ್ನು ನಾಲ್ಕು ದಿನದ ನಂತರ ಬಂಧಿಸಿದ್ದಾರೆ. ಆರೋಪಿಯನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಕೊಲೆಗೆ ನಿಜವಾದ ಕಾರಣವೇನು ಎಂಬುದು ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಭಾಸ್ಕರ್ ಹಾಗೂ ಶಾಂತಾ ದಂಪತಿ ಇವರು ಮೂಲತಃ ಮಂಗಳೂರಿನವರು. ಕಳೆದ 13 ವರ್ಷದಿಂದ ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ತಮ್ಮ ಸ್ವಂತ ಮನೆಯಲ್ಲಿ ನೆಲೆಸಿದ್ದರು.
ಮೃತ ಭಾಸ್ಕರ್ ಕೊಡಿಗೆಹಳ್ಳಿ ಸಮೀಪ ತಮ್ಮ ಸ್ನೇಹಿತರ ಕ್ಯಾಂಟೀನ್ನಲ್ಲಿ ಕ್ಯಾಶಿಯರ್ ಆಗಿದ್ದರು. ಮೃತ ಶಾಂತಾ ಕೇಂದ್ರ ಸರ್ಕಾರ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಮೊದಲನೇ ಮಗ ಸಜಿತ್ ವಿವಾಹವಾಗಿ ಕೊಡಿಗೆಹಳ್ಳಿಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದನು. ಎರಡನೆಯ ಮಗ ಆರೋಪಿ ಶರತ್ ಮನೆಯ ಮಹಡಿ ಮೇಲಿನ ಕೊಠಡಿಯಲ್ಲಿ ನೆಲೆಸಿದ್ದನು.
ಆರೋಪಿ ಶರತ್ನಿಗೆ ಕುಡಿಯುವ ಚಟವಿತ್ತು. ಆಗಾಗ ಸೈಕೋ ರೀತಿ ವರ್ತಿಸುತ್ತಿದ್ದನು. ನಿತ್ಯ ಕುಡಿದು ಬಂದು ತಂದೆ-ತಾಯಿ ಜತೆಗೆ ಜಗಳವಾಡುತ್ತಿದ್ದನು. ಜುಲೈ 17ರಂದು ಸಾಯಂಕಾಲ ಕುಡಿದು ಬಂದು ಆರೋಪಿ ತಂದೆ-ತಾಯಿ ಜತೆಗೆ ಜಗಳ ಆರಂಭಿಸಿದ್ದಾನೆ. ಈ ವೇಳೆ, ರಾಡ್ನಿಂದ ಇಬ್ಬರ ಮೇಲೂ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ. ಬಳಿಕ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಜುಲೈ 18ರ ಬೆಳಗ್ಗೆ ಕೆಲಸದ ನಿಮಿತ್ತ ಭಾಸ್ಕರ್ಗೆ ಕ್ಯಾಂಟೀನ್ ಸಿಬ್ಬಂದಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೆ ಇದ್ದಾಗ ಕ್ಯಾಂಟೀನ್ ಸಿಬ್ಬಂದಿ ಮೃತರ ಹಿರಿಯ ಪುತ್ರ ಸಜಿತ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ, ಸಜಿತ್ ತನ್ನ ತಾಯಿಗೆ ಕರೆ ಮಾಡಿದ್ದಾರೆ. ಯಾರೂ ಕರೆ ಸ್ವೀಕರಿಸದ ಕಾರಣ ಪಕ್ಕದ ಮನೆಯವರಿಗೆ ಕರೆ ಮಾಡಿ ಹೇಳಿದ್ದಾರೆ. ಈ ವೇಳೆ ದಂಪತಿ ಇಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ತಂದೆ-ತಾಯಿಯನ್ನು ಶರತ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ ತಮ್ಮನ ವಿರುದ್ಧ ಅಣ್ಣ ಸಜಿತ್ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.