ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಭಯೋತ್ಪಾದಕ ಎಂದರೆ ಅದು ನಾಥೂರಾಮ್ ಗೋಡ್ಸೆ. ಆತ ಹತ್ಯೆ ಮಾಡಿದ್ದು ಮಹಾತ್ಮ ಗಾಂಧಿಯವರನ್ನಷ್ಟೆ ಅಲ್ಲ, ಈ ದೇಶದ ಅಹಿಂಸೆಯನ್ನೂ ಹತ್ಯೆ ಮಾಡಿದ ಎಂದು ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಭಾನುವಾರ ನಡೆದ ಸಾಮರಸ್ಯ ಸಹಬಾಳ್ವೆ ಸಂಗಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಗೌರಿ ಲಂಕೇಶ್ ಅವರ ಜನ್ಮದಿನ. ಅವರು ಜೀವಿಸಿದ್ದರೆ ಇಂದಿಗೆ 61 ವರ್ಷಗಳು ತುಂಬುತ್ತಿದ್ದವು, ಗಾಂಧಿಯನ್ನು ಕೊಂದವರೆ ಗೌರಿಯನ್ನು ಕೊಂದರು ಎಂದು ಕಿಡಿಕಾರಿದರು.
ಗುಜರಾತ್ ನರಮೇಧವನ್ನು ಹೊರ ಜಗತ್ತಿಗೆ ತೋರಿಸಿದ್ದ ತೀಸ್ತಾ ಸೆಟಲ್ವಾಡ್
2002ರ ಗುಜರಾತ್ ನರಮೇಧವನ್ನು ಹೊರ ಜಗತ್ತಿಗೆ ಎತ್ತಿ ತೋರಿಸಿದವರು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು, ಆ ನಂತರ ಸರ್ಕಾರ ಅವರನ್ನು ಬಂಧಿಸಿತು, ಅವರು ಬಂಧಿಸಿದಾಗಲೂ ಧೈರ್ಯವಾಗೆ ಇದ್ದರು, ಬಿಡುಗಡೆಯಾದಾಲೂ ಧೈರ್ಯವಾಗೆ ಇದ್ದಾರೆ. ಈಗಿನ ಸರ್ಕಾರದ ಸರ್ವಾಧಿಕಾರಿ ಪ್ರಭುತ್ವದ ಮುಂದೆ ಅವರೆಂದೂ ಎದೆಗುಂದಲಿಲ್ಲ, ಪೊಲೀಸರಿಗೆ ಹಾಗೂ ಜೈಲಿಗೆ ಎಂದೂ ಹೆದರಲಿಲ್ಲ ಎಂದು ವಿವರಿಸಿದರು.
ಶಶಿಕಾಂತ್ ಸೆಂಥಿಲ್ ಮಾದರಿ
ದೇಶದಲ್ಲಿ ಸಿ.ಎ, ಎನ್.ಆರ್.ಸಿ ಹೋರಾಟಗಳು ವ್ಯಾಪಕವಾಗಿದ್ದ ಸಂದರ್ಭದಲ್ಲಿ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದ ಶಶಿಕುಮಾರ್ ಸೆಂಥಿಲ್ ಅವರು, ಪ್ರಭುತ್ವದ ದರ್ಪ, ದಬ್ಬಾಳಿಕೆ, ಹಿಂಸೆಯನ್ನ ನೋಡಲಾಗದೇ, ಮನುಷ್ಯರಿಗೆ ಇರುವುದು ಒಂದೇ ಜನ್ಮ ಅದನ್ನು ಮೌಲ್ಯಯುತವಾಗಿ ಜೀವಿಸಬೇಕೆಂದು ಭಾವಿಸಿ, ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಜನರ ಧ್ವನಿಯಾಗಿ ಹೋರಾಟಕ್ಕೆ ಧುಮುಕಿದರು. ಒಂದು ಕಡೆ ತೀಸ್ತಾ ಮೇಡಂ ಅವರು ಹಾಗೂ ಮತ್ತೊಂದು ಕಡೆ ಅತ್ಯುನ್ನತ್ತ ಐಎಎಸ್ ಅಧಿಕಾರಿ ಹುದ್ದೆಯನ್ನು ತೋರಿದು ಬಂದ ಶಶಿಕುಮಾರ್ ಸೆಂಥಿಲ್ ಅವರು ನಮಗೆ ಎರಡು ಉತ್ತಮ ಮಾದರಿಗಳಾಗಿದ್ದಾರೆಂದು ಬಣ್ಣಿಸಿದರು.
ಟಿಪ್ಪುವಿನ ಅಪ್ರತಿಮ ಸಾಹಸ ಅನಾವರಣ
ಇಂದು ಟಿಪ್ಪುವಿನ ಅಪ್ರತಿಮ ಸಾಧನೆಗಳನ್ನು ಒಳಗೊಂಡಿರುವ ಪುಸ್ತಕವನ್ನು ಶಶಿಕುಮಾರ್ ಸೆಂಥಿಲ್ ಅವರು ಬಿಡುಗಡೆ ಮಾಡಿದ್ದಾರೆ. ಯಾರು ಎಷ್ಟೆ ಅಪಪ್ರಚಾರ ಮಾಡಿದರೂ ಟಿಪ್ಪುವಿನ ಸಾಧನೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ, ಟಿಪ್ಪವು ಜನಪದರ ಲಾವಣಿಯಲ್ಲಿ ಚಿರಸ್ತಾಯಿಯಾಗಿದ್ದಾನೆ. ಟಿಪ್ಪು ಎಂದರೆ ನಾಡಿನ ಹೋರಾಟ, ಅಪ್ರತಿಮ ಸಾಹಸ, ಸ್ವಾತಂತ್ರ್ಯ ಹೋರಾಟ, ವಿಮೋಚನೆಗಳೆ ಕಣ್ಮುಂದೆ ಬರುತ್ತದೆ ಎಂದು ನುಡಿದರು.