ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಗಲಾಟೆ ಬಿಡಿಸಲು ಹೋಗಿದ್ದ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಕೊಪ್ಪ ಗ್ರಾಮದ ಸಾಗರ್(25)ಕೊಲೆಯಾದ ಯುವಕ.
ಕಳೆದ ರಾತ್ರಿ ಕೊಪ್ಪದ ಸಿಂಚನ ಡಾಬಾದಲ್ಲಿ ಸಾಗರ್ ತನ್ನ ಸ್ಮೇಹಿತರ ಜೊತೆ ಊಟ ಮಾಡುತ್ತಿದ್ದಾಗ ಪಕ್ಕದ ಟೇಬಲಿನಲ್ಲಿದ್ದ ಮೂವರು ಸ್ನೇಹಿತರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದರು. ಆಗ ಸಾಗರ್ ಎಂಬಾತ ಗಲಾಟೆ ಬಿಡಿಸಲು ಮಧ್ಯಪ್ರವೇಶ ಮಾಡಿದ್ದ.
ಈ ಸಂದರ್ಭದಲ್ಲಿ ಸಾಗರನ ವಿರುದ್ಧ ಗಿರೀಶ, ರಾಕೇಶ ಹಾಗೂ ಪ್ರತಾಪ ಜೋರಾಗಿ ಜಗಳ ಮಾಡಲು ನಿಂತಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಕುಡಿದ ಮತ್ತಿನಲ್ಲಿದ್ದ ಗಿರೀಶ ಚಾಕುವಿನಿಂದ ಸಾಗರನ ಎದೆಯ ಎಡಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಕೂಡಲೇ ತೀವ್ರ ರಕ್ತಸ್ರಾವವಾಗುತ್ತಿದ್ದ ಸಾಗರನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ರವಾನೆ ಮಾಡಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಗರ್ ಮೃತ ಪಟ್ಟಿದ್ದಾನೆ.
ಸಾಗರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ರಾಕೇಶ ಎಂಬಾತನನ್ನು ಕೊಪ್ಪ ಪೋಲಿಸರು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಗಿರೀಶ ಹಾಗೂ ಪ್ರತಾಪನಿಗಾಗಿ ಶೋಧ ನಡೆಸಿದ್ದಾರೆ.
ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.