ಮಂಡ್ಯದ ಗಾಂಧಿ ಎಂದೇ ಜನಜನಿತರಾಗಿರುವ ಕೆ.ಆರ್.ಪೇಟೆ ಕೃಷ್ಣ ಅವರ 83ನೇ ಹುಟ್ಟು ಹಬ್ಬದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಕೃಷ್ಣ ಅವರ ಆತ್ಮಕಥನ ”ಅಂತರಾಳ” ಪುಸ್ತಕದ ಬಿಡುಗಡೆ, ಸಾಕ್ಷ್ಯಚಿತ್ರ ಪ್ರದರ್ಶನ ಸಮಾರಂಭವನ್ನು ಜು.1ರಂದು ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ. ಲಿಂಗಪ್ಪ ಸಹಕಾರ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ ತಿಳಿಸಿದರು.
ಪ್ರತಿಷ್ಠಾನದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು
ಎತ್ತಿ ಹಿಡಿದು, ಗಾಂಧಿವಾಧಿಗಳಾಗಿ ಸುದೀರ್ಘ 40 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯಿಲ್ಲದಂತೆ ರಾಜಕೀಯ ರಂಗದ ಬೆಳ್ಳಿ ಚುಕ್ಕಿಯಂತೆ ಕೆಲಸ ಮಾಡಿದ ಕೃಷ್ಣ ಅವರ ಆದರ್ಶ ಹಾಗೂ ಸದ್ಗುಣಗಳನ್ನು ನಮ್ಮ ಮುಂದಿನ ತಲೆಮಾರಿಗೆ ಪರಿಚಯಿಸುವ ದೃಷ್ಠಿಯಿಂದ ಮಂಡ್ಯದ ಗಾಂಧಿ ಕೃಷ್ಣ ಅವರ ಹುಟ್ಟುಹಬ್ಬವನ್ನು ವೈಶಿಷ್ಠಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಕೃಷ್ಣ ಅವರ ಆತ್ಮಕಥನ ಅಂತರಾಳ ಪುಸ್ತಕವನ್ನು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಬಿಡುಗಡೆ ಮಾಡಿ, ಕೃಷ್ಣರ ಜೀವನ ಸಾಧನೆಗಳನ್ನು ಕುರಿತು ಮಾತನಾಡಲಿದ್ದಾರೆ. ಶಾಸಕ ಹೆಚ್.ಟಿ.ಮಂಜು ವಿವಿಧ
ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವರು. ಮಾಜಿ ಸಚಿವ ಡಾ. ನಾರಾಯಣಗೌಡ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವರು ಎಂದರು.
ವಿಶೇಷ ಆಹ್ವಾನಿತರಾಗಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಮರಿತಿಬ್ಬೇಗೌಡ, ಮಧುಮಾದೇಗೌಡ, ದರ್ಶನ್
ಪುಟ್ಟಣ್ಣಯ್ಯ, ದಿನೇಶ್ಗೂಳಿಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಂ.ಪುಟ್ಟಸ್ವಾಮಿಗೌಡ, ಬಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುಂಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮನ್ಮುಲ್ ನಿರ್ದೇಶಕ ಡಾಲುರವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಮತ್ತಿತರರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ
ಪ್ರೊ.ಬಿ.ಜಯಪ್ರಕಾಶಗೌಡ, ಪ್ರಗತಿಪರ ಕೃಷಿಕ ಮಾವಿನಕೆರೆ ರಮೇಶ್, ಸಾವಯವ ಕೃಷಿಕ ಗುಡುಗನಹಳ್ಳಿ ಪ್ರಸನ್ನ, ಅಂಗನವಾಡಿಕಾರ್ಯಕರ್ತೆ ಅನುವಿನಕಟ್ಟೆ ಬಿ.ಕೆ.ಶೋಭಾ, ಆಶಾಕಾರ್ಯಕರ್ತೆ ವಿಠಲಾಪುರದ ಎಂ.ಆರ್.ಜ್ಯೋತಿ ಹಾಗೂ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ಆರು ವಿದ್ಯಾರ್ಥಿಗಳಿಗೆ ಕೃಷ್ಣ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಕತ್ತರಘಟ್ಟ ವಾಸು, ಖಜಾಂಚಿ ಹೆಚ್.ಜೆ.ರಮೇಶ್, ನಿರ್ದೇಶಕರಾದ
ಆರ್.ಎಸ್.ಶಿವರಾಮೇಗೌಡ, ಹಾದನೂರು ಪರಮೇಶ್, ಆಂತರಿಕ ಲೆಕ್ಕಪರಿಶೋಧಕ ಎಂ.ಬಿ.ತಿಮ್ಮೇಗೌಡ ಉಪಸ್ಥಿತರಿದ್ದರು.