ಕೆ.ಆರ್.ಎಸ್. ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಪ್ರಮುಖ ಬೆಳೆಯಾಗಿರುವ ಭತ್ತದ ಬಿತ್ತನೆ ಕಾರ್ಯ ವಿಳಂಬವಾಗುತ್ತಿದ್ದು, ಕೊಡಗು ಜಿಲ್ಲೆಯ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಕೂಡಲೇ ನಾಲೆಗಳಿಗೆ ನೀರು ಹರಿಸಿ ಬೆಳೆದು ನಿಂತಿರುವ ಕಬ್ಬಿನ ಬೆಳೆ ರಕ್ಷಣೆ ಹಾಗೂ ಭತ್ತದ ಬಿತ್ತನೆ ಕಾರ್ಯಕ್ಕೆ ಅನುವು ಮಾಡಿಕೊಡಬೇಕೆಂದು. ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿತ್ತನೆ ಬೀಜ ವಿತರಣೆ ಹಾಗೂ ಭತ್ತದ ಬೆಳೆಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಆಧಾರಿಸಿ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು. ರಾಜ್ಯ ಸರ್ಕಾರ ನೀಡುತ್ತಿರುವ ಕ್ವಿಂಟಾಲ್ ಭತ್ತಕ್ಕೆ 2040 ರೂ. ಪ್ರೋತ್ಸಾಹ ಧನವನ್ನು ಕೇರಳ ಸರ್ಕಾರದ ಮಾದರಿಯಲ್ಲಿ 2832ಕ್ಕೆ ಹೆಚ್ಚಿಸಿ, ಹೆಕ್ಟೇರ್ ಭತ್ತ ಬೆಳೆಗೆ ನೀಡುತ್ತಿರುವ 2500 ರೂ. ಕೃಷಿ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಆಗ್ರಹಿಸಿದರು.
ಮೈಷುಗರ್ ಕಾರ್ಖಾನೆಗೆ ಐ.ಎ.ಎಸ್. ಅಧಿಕಾರಿಯನ್ನು ಎಂ.ಡಿ.ಯಾಗಿ ನೇಮಿಸಿರುವುದು ಸ್ವಾಗತಾರ್ಹವಾಗಿದ್ದು, ಹಿಂದಿನ ಎಂ.ಡಿ ಆಡಳಿತಾವಧಿಯಲ್ಲಿ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು. ಕಾರ್ಖಾನೆ ಸುಸ್ಥಿತಿಯಲ್ಲಿ ನಡೆಯಲು ಅಗತ್ಯವಾಗಿರುವ ತಾಂತ್ರಿಕ ಸಿಬ್ಬಂದಿ ಜೊತೆ ರಿಕವರಿ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಮುಖಂಡರಾದ ಪಣಕನಹಳ್ಳಿ ವೆಂಕಟೇಶ್, ಶಿವಣ್ಣ ನಾಗಮಂಗಲ, ಹೆಚ್.ಎನ್ ರಮೇಶ್, ದಿವ್ಯ, ಗಾಳದಾಳು, ನರಸಿಂಹನ್, ಅಪ್ಪಾಜಿ ಹಾಗೂ ಪಾಪೇಗೌಡ ಉಪಸ್ಥಿತರಿದ್ದರು.