ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು, ಓಲೈಕೆ ರಾಜಕಾರಣಕ್ಕೆ ಮುಂದಾಗಿದ್ದು ವಿಧಾನಸಭೆ ಕಲಾಪದ ವಿಚಾರವನ್ನು ಅನಗತ್ಯವಾಗಿ ಹಾದಿ ಬೀದಿಗಳಲ್ಲಿ ಪ್ರಸ್ತಾಪಿಸಿ ಅನಾಗರೀಕತೆ ಪ್ರದರ್ಶಿಸಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಕಿಡಿಕಾರಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ರಲ್ಲಿ ನಡೆಸ ವಿಧಾನಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷದ ಅಂದಿನ ಅಭ್ಯರ್ಥಿಗಳು ಜನಾದೇಶಕ್ಕೆ ತಲೆಬಾಗಿ ಮೌನವಾಗಿದ್ದರು. ಆದರೆ ಪ್ರಸ್ತುತ ಜೆಡಿಎಸ್ ನ ಮಾಜಿ ಶಾಸಕರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಆರ್ಭಟಿಸಲು ಮುಂದಾಗಿರುವುದು ಕುಮಾರಸ್ವಾಮಿ ಅವರ ಓಲೈಕೆಗಾಗಿಯೇ ಎಂದು ಪ್ರಶ್ನಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ 26 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ನರೇಂದ್ರಸ್ವಾಮಿ ಅವರನ್ನು ಕುರಿತು ಅನ್ನದಾನಿ ಅವರು, 5 ವರ್ಷಗಳ ಕಾಲ ಬಾಯಿ ಮುಚ್ಚಿಕೊಂಡಿರುವಂತೆ ತಿಳಿಸಿದ್ದರು. ಆದರೆ 2023ರ ಚುನಾವಣೆಯಲ್ಲಿ 46 ಸಾವಿರ ಮತಗಳಿಂದ ನರೇಂದ್ರಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ. ಹೀಗಿರುವಾಗ ಅವರು ಸುಮ್ಮನೆ ಇರಬೇಕಲ್ಲವೇ ? ಎಂದು ಮೂದಲಿಸಿದ ಅವರು, ಮಾಜಿ ಶಾಸಕ ಅನ್ನದಾನಿ ಅವರ ಚರಿತ್ರೆ ಮತ್ತು ಸಂಸ್ಕೃತಿ ಕ್ಷೇತ್ರದ ಜನರಿಗೆ ಮನವರಿಕೆ ಆಗಿದ್ದು, ಪ್ರಸ್ತುತ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.
ಮಾಜಿ ಶಾಸಕರಾದ ಕೆ.ಸುರೇಶ್ ಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಅವರು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರನ್ನು ತೇಜೋವಧೆ ಮಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ದಿಗೆ ಅಗತ್ಯವಾಗಿರುವ ಸಲಹೆ, ಸಹಕಾರ ನೀಡಲು ಮುಂದಾಗಬೇಕು. ನಾಗಮಂಗಲದಲ್ಲಿ ಕೆಡಿಪಿ ಸಭೆ ಕರೆಯಲಾಗದ ಮಾಜಿ ಶಾಸಕ ಸುರೇಶ್ ಗೌಡರು, ವಿಷ ಸೇವಿಸಿದ್ದ ಚಾಲಕ ಜಗದೀಶ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದಾಗ ಆಂಬುಲೆನ್ಸ್ ತಡೆದು ವಿಳಂಬ ಮಾಡಿದ್ದಾರೆ. ಈ ಘಟನೆ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದರು.
ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನೂತನ ಸರ್ಕಾರ ಬದ್ದವಾಗಿದ್ದು, ಇಲಾಖಾವಾರು ಅನುದಾನದಲ್ಲಿ ಇತರೆ ಜಿಲ್ಲೆಗಿಂತ ಹೆಚ್ಚು ಅನುದಾನ ಲಭ್ಯವಾಗುವ ವಿಶ್ವಾಸವಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಹೆಚ್.ಬಿ.ರಾಮು, ಕೆ.ಆರ್.ಪೇಟೆ ಕಾಂಗ್ರೆಸ್ ನಾಯಕ ಬಿ.ಎಲ್.ದೇವರಾಜು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ನಿರ್ದೇಶಕ ಹಾಲಹಳ್ಳಿ ಅಶೋಕ್, ಮುಖಂಡರಾದ ದೇವರಾಜು, ಕೌಡ್ಲೆ ಚನ್ನಪ್ಪ, ಸುಂಡಹಳ್ಳಿ ಮಂಜುನಾಥ್ ಮತ್ತಿತರರಿದ್ದರು.