ಮಂಡ್ಯ ನಗರದಲ್ಲಿ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮಂಡ್ಯದ ಸಂಜಯ್ ಸರ್ಕಲ್ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ, ೬೮ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.
ರಾಜ್ಯ ಸಂಘಟನಾ ಕಾರ್ಯದರ್ಶಿ (ಮಂಡ್ಯ ಜಿಲ್ಲಾ ಉಸ್ತುವಾರಿ) ಅರುಣ ಕುಮಾರ ಹೆಚ್ ಮಲ್ಲೇಗೌಡ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ನಡೆದು ಬಂದ ಹಾದಿಯ ಬಗ್ಗೆ ಕಿರು ಪರಿಚಯ ಮಾಡಿ, ಕನ್ನಡಿಗರಾದ ನಾವುಗಳು ಕನ್ನಡ ಹಬ್ಬವನ್ನು ಆಚರಿಸುವುದು ಅತ್ಯಂತ ಸಂತಸ ಹಾಗು ಹೆಮ್ಮೆಯ ಸಂಗತಿ, ಕರ್ನಾಟಕದ ಉಸಿರೇ ಕನ್ನಡ ಭಾಷೆ, ಕನ್ನಡ ಭಾಷೆಯಿಂದ ಕನ್ನಡ ಸಂಸ್ಕೃತಿ,
ಕನ್ನಡ ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ, ಆದ್ದರಿಂದ ಕನ್ನಡ ಭಾಷೆಯನ್ನು ಉಳಿಸಲು ನಾವೆಲ್ಲ ಶ್ರಮಿಸೋಣ ಎಂದರು.
ಕನ್ನಡ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸಲು ಈ ರಾಜ್ಯೋತ್ಸವದಂದು ಶಪಥ ಮಾಡೋಣವೆಂದು, ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನ, ಮೂಲಭೂತ ಸೌಕರ್ಯಗಳ ಲಭ್ಯತೆಯನ್ನು ಖಾತರಿ ಪಡಿಸಲು, ಕೆ.ಆರ್.ಎಸ್ ಪಕ್ಷದ ಆಯಾ ತಾಲ್ಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಇದೆ ನವೆಂಬರ್ ತಿಂಗಳಲ್ಲಿ ಆಯ್ದ ಶಾಲೆಗಳಿಗೆ ಭೇಟಿ ನೀಡಿ, ಅವಶ್ಯ ವರದಿಯನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿ, ಸರ್ಕಾರದ ಗಮನ ಸೆಳೆಯುವ ಮೂಲಕ ಸರ್ಕಾರಿ ಶಾಲೆಗಳ ಉನ್ನತಿಕರಣಗೊಳಿಸುವ ಸದುದ್ದೇಶವನ್ನ ತಿಳಿಸಿದರು.
ಕನ್ನಡ ಅಳವಡಿಸಿ ಬಳಸುವ ವಿಚಾರದಲ್ಲಿ ಅದರಲ್ಲೂ ಬ್ಯಾಂಕುಗಳು, ಅಂಚೆ ಕಚೇರಿಗಳು, ಸರ್ಕಾರಿ ಕಚೇರಿಗಳಲ್ಲಿ ವ್ಯವಹರಿಸುವ ಸಂಧರ್ಭಗಳಲ್ಲಿ ಕನ್ನಡದ ನಮೂನೆ(ಅರ್ಜಿ, ಚಲನ್, ಇತ್ಯಾದಿ)ಗಳನ್ನ ಕೇಳಿ ಪಡೆಯಬೇಕಾದ ಪರಿಸ್ಥಿತಿ ಇದೆ, ಕರ್ನಾಟಕದಲ್ಲಿ ಮಾಹಿತಿ, ಮನರಂಜನೆ,ಗ್ರಾಹಕ ಸೇವೆ, ಇತ್ಯಾದಿ..ಏನೆ ಬರಲಿ ಅದು ಕನ್ನಡದಲ್ಲಿ ಇರಬೇಕು, ಕೇಂದ್ರ ಸರ್ಕಾರದ ವಿಪರೀತ ಹಿಂದಿ ಹೇರಿಕೆಯಿಂದ, ಅದರಲ್ಲೂ ಕೇಂದ್ರ ಸರ್ಕಾರದ ಅದೀನದಲ್ಲಿ ಕೆಲಸ ನಿರ್ವಹಿಸುವ ಕಚೇರಿಗಳಲ್ಲಿ, ಬ್ಯಾಂಕು, ರೈಲ್ವೇ, ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಕೇಂದ್ರ ಸರಕಾರದ ಉದ್ಯೋಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಖಂಡನೀಯ ಎಂದರು.
ಮಂಡ್ಯ ಜಿಲ್ಲಾ ಅಧ್ಯಕ್ಷ ರಮೇಶ್’ಗೌಡ, ಜಿಲ್ಲಾ ಉಪಾಧ್ಯಕ್ಷ ಹೆಬ್ಬಕವಾಡಿ ಮಲ್ಲೇಶ, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಕಳೆದ ಶುಕ್ರವಾರವಷ್ಟೆ ಜಿಲ್ಲೆಯ ಏಳು ತಾಲ್ಲೂಕುಗಳ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ನೇಮಕಗೊಂಡ ಪದಾಧಿಕಾರಿಗಳನ್ನ ಆಯಾ ತಾಲ್ಲೂಕಿನ ಜನರಿಗೆ ತಿಳಿಸಲು, ನೇಮಕ ಪತ್ರವನ್ನ ಹಸ್ತಾಂತರಿಸಿ, ಶುಭಾಶಯ ಕೋರಲಾಯಿತು.