ಭೂಮಿ ವೈವಿಧ್ಯತೆಯ ಜೀವರಾಶಿಗಳ ಕಣಜವಾಗಿದೆ, ಜೀವಸಂಕುಲಗಳ ನಿಧಿ ಭೂ ಗ್ರಹವಾಗಿದೆಂದು ಕೃಷಿಕ ಲಯನ್ಸ್ ಸಂಸ್ಥೆಯ ಆಡಳಿತ ಅಧಿಕಾರಿ ಕೆ ಟಿ ಹನುಮಂತು ಹೇಳಿದರು.
ಮಂಡ್ಯ ನಗರದ ಮರಿಗೌಡ ಬಡಾವಣೆಯ 2ನೇ ಕ್ರಾಸ್ನಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ”ವಿಶ್ವ ಜೀವಿ ವೈವಿಧ್ಯ ದಿನಾಚರಣೆ” ಪ್ರಯುಕ್ತ “ಜೀವವೈವಿಧ್ಯವನ್ನು ಮರಳಿ ನಿರ್ಮಿಸಿ” ಎಂಬ ಘೋಷ ವಾಕ್ಯದೊಂದಿಗೆ ಕೆ.ಸಿದ್ದೇಗೌಡ (ಗುರೂಜಿ) ಉದ್ಯಾನವನ ನಿರ್ಮಾಣದಲ್ಲಿ ಸಸಿ ನೆಡುವುದರ ಮೂಲಕ ಗಣ್ಯರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಮಿಯಲ್ಲಿ ಅಸಂಖ್ಯಾತ ಜೀವಿಗಳು ಹುಟ್ಟುತ್ತವೆ, ಬೆಳೆಯುತ್ತವೆ, ಅಂತ್ಯಗೊಳುತ್ತವೆ. ಜೀವರಾಶಿಗಳು ಒಂದರಂತೆ ಇನ್ನೊಂದಿಲ್ಲ, ಇನ್ನೊಂದರಂತೆ ಮತ್ತೊಂದೊಲ್ಲ, ಜೀವಿಗಳಲ್ಲಿ ಕಂಡು ಬರುವ ಈ ವಿವಿಧತೆಯನ್ನೇ ಜೀವವೈವಿಧ್ಯತೆ ಎನ್ನುತ್ತೇವೆ ಎಂದು ನುಡಿದರು.
ವೈವಿಧ್ಯಮಯ ಜೀವರಾಶಿಗಳೊಂದಿಗೆ ಮನುಷ್ಯ ಬದುಕಬೇಕು, ಮನುಷ್ಯನೇ ಪರಿಸರ ಅಲ್ಲ, ಜೀವ ಸಂಪತ್ತು ಸಸ್ಯ ಸಂಪತ್ತಿನಿಂದ ಮಾತ್ರ ಮನುಷ್ಯ ಬದುಕಲಿಕ್ಕೆ ಸಾಧ್ಯವೇ ಹೊರತು ಮನುಷ್ಯನಿಂದ ಪರಿಸರ ಬದುಕುವುದಿಲ್ಲ ಎಂಬುದನ್ನು ಅರಿಯಬೇಕಿದೆ, ದುರಾಸೆಯಿಂದ ಮನುಕುಲ ವಿನಾಶದತ್ತ ದಾಪುಗಾಲು ಇಡುತ್ತಿರುವುದು ಗೋಚರವಾಗುತ್ತಿದೆ ಎಂದು ಎಚ್ಚರಿಸಿದರು.
ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಆಚರಿಸಲಾಗುತ್ತಿದೆ. ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ವೃಕ್ಷ ಮತ್ತು ಪ್ರಾಣಿ ಜೀವ ಸಂಕುಲ ಸಮಸ್ಯೆ ಎದುರಿಸುತ್ತಿರುವ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಜಯಶಂಕರ್ ಅವರು ಬಟ್ಟೆ ಬ್ಯಾಗ್ಗಳನ್ನು ನಾಗರೀಕರಿಗೆ ವಿತರಿಸಿ, ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು.
ಕೋಟ್ಯಾಂತರ ರೂ. ಬೆಳೆಬಾಳುವ ಜಾಗವನ್ನು ಉದ್ಯಾನವಕ್ಕೆ ದಾನವಾಗಿ ನೀಡಿರುವ ಕೆ.ಸಿದ್ದೇಗೌಡ (ಗುರೂಜಿ) ಅವರ ಹೆಸರನ್ನೆ ಉದ್ಯಾನವನಕ್ಕೆ ನಾಮಕರಣ ಮಾಡಲಬೇಕೆಂದು ನಗರಸಭೆಗೆ ಮನವಿ ಸಲ್ಲಿಸಲು ನಿರ್ದರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ದಂತ ವೈದ್ಯ ಡಾ.ಚಂದ್ರಶೇಖರ್, ಮಂಡ್ಯ ನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಶಿವಕುಮಾರ್, ಸ್ಥಳೀಯ ಮುಖಂಡರಾದ ದೇವೇಗೌಡ, ಪ್ರೊ.ಶಂಕರೇಗೌಡ, ಪ್ರಾಧ್ಯಾಪಕ ನಂಜಪ್ಪ , ಯೋಗೇಶ್, ರವಿಕುಮಾರ್, ಸುರೇಶ್ಕೀಲರ, ಭೀಮರಾಜ್, ತಿಲಕ್ ಮತ್ತಿತರರು ಇದ್ದರು.