ಪೌರಕಾರ್ಮಿಕರರ ಜೀವವಿಮೆಯ ಹಣ ಅವರ ಬ್ಯಾಂಕಿನ ಖಾತೆಯಿಂದಲೇ ನೇರವಾಗಿ ಕಡಿತವಾಗುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗಿದೆ ಎಂದು ಮಂಡ್ಯ ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ತಿಳಿಸಿದರು.
ಮಂಡ್ಯದ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ದತ್ತೋಪಂತ್ ತೆಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ನವದೆಹಲಿ ಇವರ ವತಿಯಿಂದ ಇಂದು ನಡೆದ ಕಾರ್ಮಿಕರ ಶಿಕ್ಷಣ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ, ಇಂತಹ ಸಂದರ್ಭದಲ್ಲಿ ಅವರು ಜೀವವಿಮೆ ಹಣವನ್ನು ಹೋಗಿ ಪಾವತಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಖಾತೆಯಿಂದಲೇ ಹಣ ಕಡಿತವಾಗುವ ವ್ಯವಸ್ಥೆ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಬೇಕೆಂದು ಸೂಚಿಸಿದರು.
ಬೆಂಗಳೂರಿನ ಡಿ.ಟಿ.ಎನ್.ಬಿ.ಡಬ್ಲ್ಯೂ.ಇ.ಡಿ ನ ವಿಭಾಗಿಯ ನಿರ್ದೇಶಕರಾದ ಡಾ. ಎನ್. ಸಂದ್ಯಾರಾಣಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಗರಸಭೆಯ ಪರಿಸರ ವಿಭಾಗದ ಅಭಿಯಂತರರಾದ ರುದ್ರೇಗೌಡ, ಶಿಕ್ಷಣಾಧಿಕಾರಿ ಸತೀಶ್ ಕುಮಾರ್, ನಗರಸಭೆಯ ಕಂದಾಯ ನಿರೀಕ್ಷಕರಾದ ನಾಗರಾಜು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಗಲ ಯೋಗಿಶ್, ಕೆ.ಪಿ. ಅರುಣಾಕುಮಾರಿ, ಗೀತಾ ಇನ್ನಿತರರಿದ್ದರು.