ವರದಿ: ಪ್ರಭು ವಿ ಎಸ್
ಮಂಡ್ಯ ಜಿಲ್ಲಾ ಹಾಗೂ ತಾಲೂಕು ಆಡಳಿತದ ವತಿಯಿಂದ ಫೆ.11ರ ಭಾನುವಾರ ಆಯೋಜಿಸಿರುವ ಸರಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಇತರೆ ಇಲಾಖೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಸಮಾವೇಶ ಸ್ಥಳಕ್ಕೆ ವಿವಿಧ ಇಲಾಖೆ ಅಧಿಕಾರಿಗಳೊಟ್ಟಿಗೆ ಭೇಟಿ ನೀಡಿದ ಶಾಸಕ ಕೆ.ಎಂ. ಉದಯ್ ಪರಿಶೀಲನೆ ನಡೆಸಿದರು.
ಮದ್ದೂರು ಪಟ್ಟಣದ ಸರಕರಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಸ್ಥಳಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸುವ ಜತೆಗೆ ಅಗತ್ಯ ಮಾಹಿತಿಗಳನ್ನು ಪಡೆದರು.
ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರು ಸೇರಿದಂತೆ ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದು ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಸೇರಿದಂತೆ ಇತರರು ಭಾಗವಹಿಸಲಿದ್ದು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ತಾಲೂಕಿನಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಲಿದ್ದು ಸಮಾವೇಶಕ್ಕೆ ಆಗಮಿಸುವವರಿಗೆ ಬಸ್ ಸೌಲಭ್ಯ, ಕುಡಿಯುವ ನೀರು, ವಾಹನ ನಿಲುಗಡೆ, ಊಟದ ವ್ಯವಸ್ಥೆ ಮತ್ತು ಭಾನುವಾರದಂದು ಪಟ್ಟಣದ ಪೇಟೇಬೀದಿ ಮಾರ್ಗವನ್ನು ಏಕಮುಖ ಸಂಚಾರ ಕೈಗೊಂಡಿದ್ದು ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಇದರಿಂದಾಗಿ ಪ್ರತಿಯೊಂದು ಕುಟುಂಬವು ಫಲಾನುಭವಿಗಳಾಗಿದ್ದು ಮುಂದಿನ ದಿನಗಳಲ್ಲಿ ಸರಕಾರ ಮತ್ತಷ್ಟು ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದರು.
ಈ ವೇಳೆ ತಹಸೀಲ್ದಾರ್ ಕೆ.ಎಸ್. ಸೋಮಶೇಖರ್, ತಾ.ಪಂ. ಇಓ ಸಂದೀಪ್, ಬಿಇಓ ಸಿ.ಎಚ್. ಕಾಳೀರಯ್ಯ, ತಾಲೂಕುಮಟ್ಟದ ಅಧಿಕಾರಿಗಳಾದ ರೇಖಾ,ಕರಿಬಸವಯ್ಯ, ರವೀಂದ್ರ.ಬಿ.ಗೌಡ, ವೃತ್ತ ನಿರೀಕ್ಷಕರಾದ ಕೆ.ಆರ್. ಪ್ರಸಾದ್, ವೆಂಕಟೇಗೌಡ ಮುಖಂಡರಾದ ಶಂಕರೇಗೌಡ, ಜಮೀರ್, ಫೈರೋಜ್, ಕೃಷ್ಣಪ್ಪ, ಕಿಟ್ಟಿ, ತಿಮ್ಮೇಗೌಡ ಇತರರಿದ್ದರು.