✍️ ಸಿದ್ದರಾಜು ಎಂ
ಸಂಚಾಲಕರು, ಭೂಮಿ ಮತ್ರು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಂಡ್ಯ
ನಾಗರೀಕತೆ ಎಷ್ಟೆ ಮುಂದುವರಿದರೂ ಬಡ ಜನರಿಗೆ ಅದರಲ್ಲೂ ಶ್ರಮಿಕ ನಗರ (ಸ್ಲಂ ಗಳು)ಗಳಲ್ಲಿ ವಾಸ ಮಾಡುವ ಜನರಿಗೆ ಇಂದಿಗೂ ಕನಿಷ್ಠ ಮೂಲಸೌಲಭ್ಯಗಳೆ ಗಗನಕುಸುಮವಾಗಿದೆ.
ಮದ್ದೂರು ತಮಿಳು ಕಾಲೋನಿಯ 106 ಕುಟುಂಬಗಳ 450 ಕ್ಕೂ ಹೆಚ್ಚು ಜನರಿಗೆ ಶೌಚಾಲಯಗಳೇ ಇಲ್ಲವಾಗಿವೆ. ಅಂಗೈ ಅಗಲದಷ್ಟು ಇರುವ ಜಾಗದಲ್ಲಿದಲ್ಲಿ ಪ್ರಾಣಿಗಳಿಂದ ನಿಕೃಷ್ಟವಾಗಿ ಬದುಕುವುದು ಇಲ್ಲಿನ ಜನರಿಗೆ ನಕರಯಾತನೆಯಾಗಿದೆ.
ಯಾವ ಜನಪ್ರತಿನಿಧಿಗಳು ಕೂಡ ಈ ಬಡವರ ಕಷ್ಟ ಕೇಳುತ್ತಿಲ್ಲ, ಇಲ್ಲಿನ ಬಡವರು ಅಕ್ಷರಶಃ ಕಂಗಲಾಗಿದ್ದಾರೆ. ನಮ್ಮ ಸಮಸ್ಯೆಗಳನ್ನು ಸರಿಪಡಿಸದೆ ಜನಪ್ರತಿನಿಧಿಗಳು ಯಾರಿಗಾಗಿ ಆಡಳಿತ ನಡೆಸುತ್ತಿದ್ದಾರೆಂದು ಇಲ್ಲಿನ ನಿವಾಸಿಗಳು ಕಣ್ಣಿರು ಹಾಕುತ್ತಿದ್ದಾರೆ. ಮದ್ದೂರಿನ ತಮಿಳು ಕಾಲೋನಿ ಎಂದು ಅಂತಿಮ ಘೋಷಣೆಯಾಗಿ ಇಂದಿಗೆ 41ವರ್ಷಗಳೆ ಕಳೆದಿವೆ, ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲಿ ಭರವಸೆಯನ್ನೆ ಹೊತ್ತು ಇಲ್ಲಿನ ಜನರು ಜನಪ್ರತಿನಿಧಿಗಳು ಮತ ಹಾಕುತ್ತಲೆ ಬರುತ್ತಿದ್ದಾರೆ, ಅವರು ಗೆದ್ದು ಅಧಿಕಾರ ಹಿಡಿದರೆ ಹೊರತು ಇವರ ಕಷ್ಟವಂತೂ ತೀರಲಿಲ್ಲ.
ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕನಿಷ್ಟ ಒಂದು ಸಾಮೂಹಿಕ ಶೌಚಾಲಯವು ಇಲ್ಲ. ಇಲ್ಲಿನ ಅದೆಷ್ಟೊ ಹೆಣ್ಣು ಮಕ್ಕಳು ಕಿಲೋ ಮೀಟರ್ ಗಟ್ಟಲೆ ದೂರದಲ್ಲಿರುವ ಬಸ್ ನಿಲ್ದಾಣಕ್ಕೆ ರಾತ್ರಿ ವೇಳೆ ತೆರಳಿ ಶೌಚ ಮುಗಿಸಿ ಬರುತ್ತಿದ್ದಾರೆ. ಹಾಗೇ ಬರುವ ದಾರಿಯಲ್ಲಿ ಪೋಲಿ ಪುಂಡರ ಕಾಟಕ್ಕೆ ತುತ್ತಾಗಿ ಕಣ್ಣಿರು ಸುರಿಸಿಕೊಂಡು ದುಃಖ, ನೋವುಗಳನ್ನು ಅನುಭವಿಸುತ್ತಿದ್ದಾರೆ.
ಈ ಕಾಲೋನಿಯಲ್ಲಿ ಪಬ್ಲಿಕ್ ಶೌಚಾಲಯ ಇದ್ದರೂ ಪ್ರತಿ ಭಾರಿಯು ಹಣ ಕೊಟ್ಟು ಬಳಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆಂದೆ ದಿನದಲ್ಲಿ ಒಬ್ಬರಿಗೆ 20 ರೂ.ನಿಂದ 25 ರೂಪಾಯಿಗಳು ವೆಚ್ಚವಾಗುತ್ತಿದೆ. ಈ ಶೌಚಾಲಯಕ್ಕೂ ಕೂಡ ಸಂಜೆ 6ಗಂಟೆಗೆ ಸರಿಯಾಗಿ ಬೀಗ ಜಡಿದು ಹೋಗಿ ಬಿಡುತ್ತಾರೆ. ಹೀಗಾದರೆ ಚಿಕ್ಕ ಮಕ್ಕಳು ವಯಸ್ಸಾದವರ ಕಥೆ ಏನು ಎಂದು ಚಿಂತಿಸುವಂತಾಗಿದೆ. ವಿಕಲಚೇತನರು, ಕಣ್ಣು ಕಳೆದು ಕೊಂಡವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಇವರ ಸಂಕಷ್ಟವನ್ನು ಗಮನಿಸಿದರೆ ಕಣ್ಣಲ್ಲಿ ನೀರು, ಹೊಟ್ಟೆಯಲ್ಲಿನ ಸಂಕಟ ಮರಗಟ್ಟುತ್ತದೆ.
ಹೆಣ್ಣು ಮಕ್ಕಳು ಗೌರವಕ್ಕಾಗಿ ಬಳಸುವ ಶೌಚಾಲಯವನ್ನು ಕಟ್ಟಿಸಿ ಕೊಡದ ನಾಯಕರಿಗೆ ನಾಚಿಕೆಯಾಗಬೇಕಿದೆ. ಅಧಿಕಾರಿಗಳ ಮನೆಯ ಮಕ್ಕಳಿಗೆ ಇಂತಹ ಪರಿಸ್ಥಿತಿ ಇದ್ದಿದ್ದಿದರೆ ಏನು ಮಾಡುತ್ತಿದ್ದರು ಅಲ್ಲವೇ ? ಕನಿಷ್ಟ ಬಡಜನರಿಗೆ ಮೂಲ ಸೌಲಭ್ಯ ಕೊಡಲಾಗದಂತ ಸ್ಥಿತಿಗೆ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಳಿದಿದ್ದಾರೆಯೇ ? ಅವರು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಇನ್ನಾದರೂ ಇಲ್ಲಿ ಜನರ ಬವಣೆಗೆ ಜನಪಪ್ರತಿನಿಧಿಗಳು ಸ್ಪಂದಿಸುವರೇ ಕಾದು ನೋಡಬೇಕಿದೆ.