ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದ ವತಿಯಿಂದ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮಂಡ್ಯ ನಗರದ ಜಿಲ್ಲಾ ಆಸ್ಪತ್ರೆಯ ರೋಗಿಗಳು ಮತ್ತು ಪ್ರೇರಣ ಅಂಧರ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸುವ ಮೂಲಕ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಮನ್ ಮುಲ್ ಪ್ರಭಾರ ಅಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ, ಹಾಲಿನ ಪ್ರಾಮುಖ್ಯತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ. ಪೌಷ್ಟಿಕಾಂಶದ ಕೊರತೆ ನೀಗಿಸಲು ಹಾಲು ಬಹಳ ಮುಖ್ಯವಾದದ್ದು ಆದ್ದರಿಂದ ಹಾಲಿನ ಕೊರತೆ ಇರುವ ಕಡೆ ಹಾಲನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಮಾತನಾಡಿ, ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು 2001ರಿಂದ ಪ್ರತಿ ವರ್ಷ ಜೂನ್ 1ರಂದು ಆಚರಿಸಲಾಗುತ್ತಿದೆ ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದು ಆಗಿದೆ ಎಂದರು.
ಹಾಲಿನ ಪೌಷ್ಠಿಕಾಂಶದ ಮೌಲ್ಯ ಮತ್ತು ಅದರ ಉತ್ಪನ್ನಗಳ ಬಗ್ಗೆ ಮತ್ತು ಅದರ ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ವಿಶ್ವ ಹಾಲು ದಿನದ ಮಹತ್ವವಾಗಿದೆ ಎಂದರು.
ಈ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಮನ್ ಮುಲ್ ಮಾರುಕಟ್ಟೆ ಅಧಿಕಾರಿ ಸಾಗರ್ ಸೇರಿದಂತೆ ಇತರರು ಹಾಜರಿದ್ದರು.