ಡಾ.ಜಿ.ಮಾದೇಗೌಡ ಪ್ರತಿಷ್ಠಾನ ನೀಡುವ 22ನೇ ವರ್ಷದ ರಾಜ್ಯಮಟ್ಟದ ಜಿ.ಮಾದೇಗೌಡ ಸಮಾಜಸೇವೆ ಮತ್ತು ಸಾವಯವ ಕೃಷಿಕ ಪ್ರಶಸ್ತಿಗೆ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಹಾಗೂ ಕೀರಣಗೆರೆ ಜಗದೀಶ್ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಬಸವರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಜು.10 ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಮಧ್ಯಾಹ್ನ 3.30 ಕ್ಕೆ ನಡೆಯುವ ಸಮಾರಂಭದಲ್ಲಿ ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹಾಗೂ ರೇಷ್ಮೆ ಕೃಷಿಯಲ್ಲಿ ಸಾಧನೆ ಮಾಡಿರುವ ಕೀರಣಗೆರೆ ಜಗದೀಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ 25,000ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂದರು.
ಕಾವೇರಿ ಪುತ್ರ ಮಹಾಕಾವ್ಯದ ಬಗ್ಗೆ ಗಮಕ ವಾಚನ, ಕಾವ್ಯವಾಚನ ನಡೆಯಲಿದೆ. ಗಮಕಿ ಸಿ.ಪಿ.ವಿದ್ಯಾಶಂಕರ್ ಅವರು ಗಮಕ ವಾಚನ ಮಾಡಿದರೆ, ಸಾಹಿತಿ ಡಾ.ಪ್ರದೀಪ್ ಕುಮಾರ್ ಅವರು ಕಾವ್ಯ ವಾಚನ ಮಾಡಲಿದ್ದಾರೆ.ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವ ಜೊತೆಗೆ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ರಚಿಸಿರುವ “ಕಾವೇರಿ ಪುತ್ರ” ಮಹಾಕಾವ್ಯವನ್ನು ಲೋಕಾರ್ಪಣೆ ಮಾಡುವರು.
ಇದೇ ವೇಳೆ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರನ್ನು ಗೌರವಿಸಲಾಗುವುದು. “ಕಾವೇರಿ ಪುತ್ರ” ಮಹಾಕಾವ್ಯ ಕೃತಿ ಕುರಿತು ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ.ಪಿ.ನಾಗರಾಜು ಮಾತನಾಡುವರು. ಜಿ ಮಾದೇಗೌಡರ ಪುತ್ರ, ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಭಾಗವಹಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ಬೋರೇಗೌಡ, ಡಾ.ಮ.ರಾಮಕೃಷ್ಣ, ನಿವೃತ್ತ ಪ್ರಾಂಶುಪಾಲ ಪ್ರೊ.ಮಾಯಿಗೌಡ ಹಾಜರಿದ್ದರು.