ಪ್ರತಿಭಾ ಪುರಸ್ಕಾರ, ಲ್ಯಾಪ್ ಟಾಪ್ ವಿತರಣೆ, ಶೌಚಾಲಯ ನಿರ್ಮಾಣ ಹಾಗೂ ಸೌರ ಒಲೆ ವಿತರಣೆಯಂತಹ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಬೆಂಗಳೂರಿನ ಡಾ.ರಾಮ ಮನೋಹರ ಲೋಹಿಯ ವಿಚಾರ ವೇದಿಕೆ ವತಿಯಿಂದ ಡಿ.8ರಂದು ಉದ್ಯೋಗಮೇಳ ಆಯೋಜನೆಗೊಳ್ಳಲಿದೆ ಎಂದು ಸಮಾಜ ಸೇವಕ ಟಿ.ಎಂ.ಪ್ರಕಾಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಆವರಣದಲ್ಲಿ ಆಯೋಜನೆಗೊಳ್ಳುವ ಉದ್ಯೋಗ ಮೇಳದ ಉದ್ಘಾಟನೆಯನ್ನು ಲೋಹಿಯ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಶಿವಣ್ಣ ದಡದಪುರ ಉದ್ಘಾಟಿಸಲಿದ್ದು, ಮೇಳದ ಅಧ್ಯಕ್ಷತೆಯನ್ನು ಶಾಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ, ಮಾಜಿ ಶಾಸಕಿ ಎಂ.ಕೆ.ನಾಗಮಣಿ ನಾಗೇಗೌಡ ಅವರು ವಹಿಸಲಿದ್ದಾರೆಂದು ತಿಳಿಸಿದರು.
ಉದ್ಯೋಗ ಮೇಳದ ಆಯೋಜನೆಯನ್ನು ಸಾರ್ಥಕಗೊಳಿಸಲು ಹಾಗೂ ಸಂದರ್ಶನ ಎದುರಿಸುವ ಬಗ್ಗೆ ಮನವರಿಕೆ ಮಾಡಿಕೊಡಲು ಡಿ.6ರಂದು ಪೂರ್ವಭಾವಿ ತರಬೇತಿ ಶಿಬಿರವನ್ನು ಆಯೋಜಿಸಿದ್ದು, 2 ದಿನಗಳ ಮೇಳಕ್ಕೆ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಉದ್ಯೋಗ ಮೇಳದಲ್ಲಿ ಹೆಸರಾಂತ ಕಂಪನಿಗಳಾ ಹುಂಡೈ, ಎಚ್.ಡಿ.ಎಫ್.ಸಿ., ಟೋಯಟಾ ಸೇರಿದಂತೆ 100 ಹೆಚ್ಚು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲಮೋ, ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.
ಆಸಕ್ತ ನಿರುದ್ಯೋಗಿಗಳು https://tinyurl.com/ips-jobfairs ಮೂಲಕ ಆನ್ ಲೈನ್ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 9632674657, 7349143993 ಹಾಗೂ 7975356112 ಸಂಪರ್ಕಿಸಬಹುದು. ಅಭ್ಯರ್ಥಿಗಳು ಬರುವಾಗ ರೆಸುಮ್ ನ 10 ಜೆರಾಕ್ಸ್ ಪ್ರತಿಗಳು ಹಾಗೂ ವಿದ್ಯಾರ್ಹತೆಯ ಸೂಕ್ತ ದಾಖಲೆಗಳನ್ನು ತರಬೇಕು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಕೀಲ ಸುಂಡಹಳ್ಳಿ ಮಂಜುನಾಥ್, ಕಾಂಗ್ರೆಸ್ ಮುಖಂಡ ಸಿ.ಎಂ.ದ್ಯಾವಪ್ಪ, ವೇದಿಕೆ ಕಾರ್ಯದರ್ಶಿ ರಮೇಶ್ ಚಂದ್ರ, ಗ್ರಾ.ಪಂ.ಅಧ್ಯಕ್ಷರ ವೇದಿಕೆ ಮುಖಂಡ ಉಪ್ಪರಕನಹಳ್ಳಿ ನಾಗೇಶ್ ಉಪಸ್ಥಿತರಿದ್ದರು.