ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನಪರ ಕೆಲಸಗಳು ಹಾಗೂ ಜೆಡಿಎಸ್ ಪಕ್ಷದ ತತ್ತ್ವ ಸಿದ್ದಾಂತಗಳನ್ನು ಒಪ್ಪಿ ಬಿಜೆಪಿ ಪಕ್ಷ ತೊರೆದು ಹಲವರು ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾಖಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಹಲವರು ಜೆಡಿಎಸ್ ಸೇರ್ಪಡೆಯಾಗುತ್ತಿರುವುದು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಪೂರಕವಾಗಿದೆ ಎಂsದರು.
ಮಂಡ್ಯಕ್ಕೆ ಶ್ರೀನಿವಾಸ್ ಕೊಡುಗೆ ಏನು?
20 ವರ್ಷ ಅಧಿಕಾರ ಅನುಭವಿಸಿದ ಶಾಸಕ ಎಂ.ಶ್ರೀನಿವಾಸ್ ಅವರದ್ದು ಮಂಡ್ಯಕ್ಕೆ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಗಾಡಿ ಬಾಡಿ ಕೆಟ್ಟರೆ ಸರಿಪಡಿಸಬಹುದು. ಆದರೆ ಗಾಡಿಯ ಇಂಜಿನ್ ಕೆಟ್ಟರೆ ಸರಿಪಡಿಸಲಾಗದು ಎಂದು ಎಂ.ಶ್ರೀನಿವಾಸ್ ಕುರಿತು ಟೀಕಿಸಿದರು.
ಪಕ್ಷದ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಹಾಗೂ ಕೋರ್ ಕಮಿಟಿಯಲ್ಲಿನ ತೀರ್ಮಾನದಂತೆಯೇ ಬಿ.ರಾಮಚಂದ್ರು ಅವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಯಾವುದೇ ಹಣದ ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕ್ಷೇತ್ರದಲ್ಲಿ ಅಭ್ಯರ್ಥಿ ಮೇಲೆ ಬಂಡಾಯ ಪರಿಣಾಮ ಬೀರುವುದಿಲ್ಲ ಎಂದರು.
ನಿಷ್ಟಾವಂತ ಕಾರ್ಯಕರ್ತರ ಮೇಲೆ ಜೆಡಿಎಸ್ ಪಕ್ಷ ನಿಂತಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಗಲಿದೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಹಾಗೂ ಎಂಎಲ್ ಸಿ ಆಗುವಂತೆ ಅವಕಾಶ ಸಿಕ್ಕಿತ್ತು. ಆದರೆ ನಿರಾಕರಿಸಿದೆ. ಆದರೀಗ ನನಗೆ ಯಾವುದೇ ಹುದ್ದೆ ನೀಡಿದರೂ ಅದನ್ನು ನಿರ್ವಹಿಸಲಿದ್ದೇನೆ ಎಂದು ತಿಳಿಸಿದರು.
ಪಕ್ಷದಲ್ಲಿ ಎಲ್ಲರೂ ಆಕಾಂಕ್ಷಿತರೇ. ಆದರೆ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಜೊತೆಗೆಪಕ್ಷದಲ್ಲಿ ಎಲ್ಲರಿಗೂ ತೃಪ್ತಿಪಡಿಸಲು ಆಗದು. ವಿರೋಧಿಗಳ ಆರೋಪಗಳಿಗೆ ಪಕ್ಷದ ಕಾರ್ಯಕರ್ತರು ಕಿವಿಗೊಡದೆ ಕೆಲಸ ಮಾಡಿ ಎಂದು ಹೇಳಿದರು.
ಮನ್ ಮುಲ್ ನೀರು-ಹಾಲು ಹಗರಣ ಕುರಿತ ಪತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ದಾಖಲೆ ಇದ್ದರೆ ಕೊಡಿ ಎಂದು ಪ್ರತಿಕ್ರಿಯಿಸಿದರು.
ನನ್ನದೇ ತಪ್ಪು
ಸಿದ್ದರಾಮೇಗೌಡರಿಗೆ ಟಿಕೆಟ್ ತಪ್ಪುವ ವಿಚಾರದಲ್ಲಿ ನನ್ನದೇ ತಪ್ಪಾಗಿದೆ. ಈ ಬಗ್ಗೆ ಕ್ಷಮೆಯಾಚಿಸುವೆ. ಮುಂದಿನ ದಿನಗಳಲ್ಲಿ ಆ ತಪ್ಪು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ಪಕ್ಷದಲ್ಲಿ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ನಾವು ಬಿಜೆಪಿ ಪಕ್ಷ ತೊರೆದಿದ್ದೇವೆ. ಮಾಜಿ ದೇವೇಗೌಡ ಹಾಗೂ ಕುಮಾರಸ್ವಾಮಿ ನಾಯಕತ್ವ ಒಪ್ಪಿ ಪಕ್ಷ ಸೇರ್ಪಡೆಯಾಗಿದ್ದೇವೆ. ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು ಜೆಡಿಎಸ್ ಸೇರಲು ಪ್ರೇರೇಪಿತವಾದವು ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗೌಡಗೆರೆ ಅಶೋಕ್, ಎಸ್ ಸಿ ಮೋರ್ಚಾ ಅಧ್ಯಕ್ಷ ಮಧುಸೂದನ್ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನಂದೀಶ್ ತಿಳಿಸಿದರು.
ಗೋಷ್ಠಿಯಲ್ಲಿ ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಇತರರಿದ್ದರು.