ಅ.2ರ ಗಾಂಧಿ ಜಯಂತಿ ಅಂಗವಾಗಿ ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಫಾರಂ ಬಳಿಯ ಗಾಂಧಿಗ್ರಾಮದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ನೌಕರರ ವತಿಯಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ನ ಧರ್ಮಧರ್ಶಿ ಎನ್.ರಾಜು ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿಗ್ರಾಮವು ಮುಖ್ಯವಾಗಿ ಯುವಕರಿಗೆ, ಮಹಿಳೆಯರಿಗೆ, ವಿಶೇಷ ಚೇತನರಿಗೆ ಸ್ಫೂರ್ತಿ ಕೇಂದ್ರವಾಗಲಿದೆ. ಗ್ರಾಮೀಣ ಯುವ ಜನಾಂಗಕ್ಕೆ ಸ್ವಯಂ ಉದ್ಯೋಗಕ್ಕೆ ಮಾರ್ಗದರ್ಶನ ಮಾಡುವ, ತರಬೇತಿ ನೀಡುವ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸುವ, ಜೀವನದಲ್ಲಿ ಉತ್ಸಾಹ ತುಂಬುವ, ಸರಳ ಹಾಗೂ ನೈತಿಕತೆಗೆ ಒತ್ತು ನೀಡುವ ಕೇಂದ್ರವನ್ನಾಗಿಸಲು ಉದ್ಧೇಶಿಸಲಾಗಿದೆ ಎಂದರು.
ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಬದಲಾವಣೆ ತರುವುದು, ಪರಿವರ್ತನೆಗೆ ನಾಂದಿ ಹಾಡುವುದು. ‘ಗಾಂಧಿಗ್ರಾಮ’ದ ಮೂಲ ಗುರಿ, ಗ್ರಾಮೀಣರು ಬಳಸುವ ಬಹುಪಾಲು ವಸ್ತುಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಿ ಕನಿಷ್ಠ ದರದಲ್ಲಿ ಮಾರಾಟ ಮಾಡುವುದು, ವ್ಯಕ್ತಿ ಮತ್ತು ಗ್ರಾಮಗಳನ್ನು ಸ್ವಾವಲಂಬಿಗಳಾಗಿಸುವುದು ಗಾಂಧಿ ಗ್ರಾಮದ ಉದ್ಧೇಶವಾಗಿದೆ ಎಂದು ಹೇಳಿದರು.
ಅ.2ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಶ್ರಮದಾನ ಉದ್ಘಾಟನೆ ಮಾಡುವರು. ಬಿಇಟಿ ಅಧ್ಯಕ್ಷ ಮಧು ಜಿ.ಮಾದೇಗೌಡ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಹೆಚ್.ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಭಾಗವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಕೆ.ಎಸ್.ಎ.ಎಸ್. ಅಪರ ನಿರ್ದೇಶಕ ಡಾ.ಸಿದ್ದರಾಜು, ಡಾ.ಜಿ.ಮಾದೇಗೌಡ ಪ್ರತಿಷ್ಟಾನದ ಅಧ್ಯಕ್ಷ ಬಿ.ಬಸವರಾಜು, ಬಿಇಟಿ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಕಾರ್ಯನಿರ್ವಹಕ ಟ್ರಸ್ಟಿ ಜಿ.ಎಂ.ಆಶಯ್, ಟ್ರಸ್ಟಿಗಳಾದ ಕೆ.ಲಿಂಗೇಗೌಡ ಪಾಪಣ್ಣ, ಎಸ್.ಜಯರಾಮು, ಮುದ್ದಯ್ಯ, ಎಸ್.ಬಸವೇಗೌಡ ಭಾಗವಹಿಸುವರು ಎಂದರು
ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಉಪಾಧ್ಯಕ್ಷ ಲಿಂಗಣ್ಣ ಬಂಧೂಕರ್, ಟ್ರಸ್ಟಿಗಳಾದ ಎನ್.ರಾಜು, ಅಂಜನಾ ಶ್ರೀಕಾಂತ್, ಎಂ.ರಾಜಣ್ಣ, ಹೆಚ್.ವಿ.ಜಯರಾಂ ಹಾಗೂ ಜಿ.ಬಿ.ಮೋಹನ್ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಬಿಇಟಿ ಪ್ರಾಂಶುಪಾಲ ಜಿ.ಕೃಷ್ಣ, ಮುಖಂಡರಾದ ಎನ್.ರಾಜು, ಸೋಮಸುಂದರ ಬಾಬು ಉಪಸ್ಥಿತರಿದ್ದರು.