ಮಂಡ್ಯ ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿದಿದೆ ವಂಶೋದ್ದಾರಕ ಬೇಕು, ಕೊನೆಯಲ್ಲಿ ಆಸರೆ ಆಗುತ್ತಾನೆ ಅನ್ನುವ ಕಾರಣಕ್ಕೇ ಹೆಣ್ಣು ಮಕ್ಕಳು ಬೇಡ ಎಂಬ ಮೂಢನಂಬಿಕೆ ಎಲ್ಲೆಡೆ ಮನೆ ಮಾಡಿದೆ ಎಂದು ವೈದ್ಯಾಧಿಕಾರಿ ಡಾ. ವಿನುತ ಆತಂಕ ವ್ಯಕ್ತಪಡಿಸಿದರು.
ವಿಮೋಚನ ಮಹಿಳಾ ಹಕ್ಕುಗಳ ವೇದಿಕೆ ಮಂಡ್ಯ ಶಾಖೆ, ಮಹಿಳಾ ಮುನ್ನಡೆ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಳವಳ್ಳಿ ತಾಲ್ಲೂಕಿನ ಭಾರತಿ ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಗರ್ಭ ಪೂರ್ವ ಮತ್ತು ಪ್ರಸವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ’ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಗಂಡು ಮಕ್ಕಳ ಬಗ್ಗೆ ಇರುವ ಮೋಹವನ್ನು ಬಿಡಬೇಕು. ಮಕ್ಕಳು ಹೆಣ್ಣಾಗಲಿ ಗಂಡಾಗಲಿ ಅವರ ನಡುವೆ ತಾರತಮ್ಯ ಎಣಿಸಬಾರದು ಎಂದರು.
ಮಹಿಳಾ ಮುನ್ನಡೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಮಾತನಾಡಿ, ಸಮಾಜದಲ್ಲಿ ನಮ್ಮ ಸುತ್ತಮುತ್ತಲ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಶೋಷಣೆ ದಿನನಿತ್ಯ ನಡೆಯುತ್ತಿವೆ, ಮಂಡ್ಯ ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿದಿದೆ, ಹೆಣ್ಣುಭ್ರೂಣ ಹತ್ಯೆಗಳು ನಡೆಯುತ್ತಿವೆ, ಇದರ ಪರಿಣಾಮ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದ ಪರಿಣಾಮ ಹೆಣ್ಣುಮಕ್ಕಳ ಮೇಲೆ ಹಿಂಸೆಗಳು, ಲೈಂಗಿಕ ಕಿರುಕುಳ, ಶೋಷಣೆ, ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಮೊದಲು ಪರಿವರ್ತನೆ ನಮ್ಮಿಂದ ಶುರುವಾಗಬೇಕು ಎಂದರು.
ವಿಮೋಚನ ಸಂಘಟನೆಯ ಜನಾರ್ಧನ ಹೂತಗೆರೆ ಮಾತನಾಡಿ, ವಿಮೋಚನ ಮಹಿಳಾ ಸಂಘಟನೆ ಕಳೆದ ಇಪ್ಪತ್ತು ವರ್ಷಗಳಿಂದ ಲಿಂಗ ಆಯ್ಕೆ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಜತೆಗೆ ಕಾನೂನಿನಲ್ಲಿ ತಿದ್ದುಪಡಿಯ ತರುವಲ್ಲಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದರು.
ಕಾನೂನಿನಿಂದ ಎಲ್ಲಾ ಬದಲಾವಣೆ ತರಲು ಸಾಧ್ಯವಿಲ್ಲ, ಜನರ ಮನಸ್ಥಿತಿ ಬದಲಾಗಬೇಕು, ಹೆಣ್ಣು ಮಕ್ಕಳನ್ನು ನೋಡುವ ದೃಷ್ಠಿಕೋನ ಬದಲಾಗಬೇಕು, ನಮ್ಮ ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆ, ಬಾಲ್ಯವಿವಾಹ ಹೆಚ್ಚಾಗಿ ನಡೆಯುತ್ತಿವೆ, ಯಾರು ದೂರು ನೀಡಲು ಮುಂದೇ ಬರುತ್ತಿಲ್ಲ, ಸಾಕ್ಷಿಯ ಕೊರತೆಯಿಂದ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿದ್ದೇವೆ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಜೊತೆಯಲ್ಲಿ ಕೈಜೋಡಿಸಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಮೋಚನ ಮಹಿಳಾ ಸಂಘಟನೆಯ ಇಂಪನ , ಎನ್ ಎಸ್ ಎಸ್ ಅಧಿಕಾರಿ ರಾಚಯ್ಯ ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೇಣುಗೋಪಾಲ, ಆರೋಗ್ಯ ಕಾರ್ಯಕರ್ತೆಯರು ,ಅಶಾ ಕಾರ್ಯಕರ್ತೆಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.