ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆ ಸುದ್ದಿಯಾಗುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ದಂಧೆ, ಶಿಕ್ಷಕಿಯ ಕೊಲೆ, ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ನ ಮುಸ್ಲಿಂ ಮಹಿಳೆಯರ ವಿರುದ್ಧದ ದ್ವೇಷ ಭಾಷಣ ಹಾಗೂ ಈಗ, ಕೆರಗೋಡಿನಲ್ಲಿ ಕೇಸರಿ ಕಾರ್ಯಕರ್ತರ ದಾಂಧಲೆಯಿಂದ ಮಂಡ್ಯ ಸುದ್ದಿಯಾಗುತ್ತದೆ. ಇದೆಲ್ಲದರ ನಡುವೆ, ಕಾಮುಕ ಯುವಕನ ಪ್ರೀತಿಗೆ ಬಿದ್ದು ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಬದುಕನ್ನೇ ಕೆಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಯೂ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯದ ಖಾಸಗಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳು ಯುವಕನ ಪ್ರೀತಿಗೆ ಬಿದ್ದಿದ್ದಳು. ಆಕೆಯೊಂದಿಗೆ ಯುವಕ ದೈಹಿಕ ಸಂಬಂಧ ಬೆಳೆಸಿದ್ದ. ಪರಿಣಾಮ, ಆಕೆ ಗರ್ಭಿಣಿಯಾಗಿದ್ದಳು. ವಿಷಯ ಯಾರಿಗಾದರು ತಿಳಿದಿರೆ ಅಪಮಾನವಾಗುತ್ತದೆ ಎಂದು ಆಕೆ ಆತ್ಮಹತ್ಯೆ ಮಾಡಿಕೊಂಡು, ಕೊನೆಯುಸಿರೆಳೆದಿದ್ದಾಳೆ. ಜೀವನ ಆರಂಭಕ್ಕೂ ಮುನ್ನವೇ ಅಂತ್ಯಕಂಡಿದ್ದಾಳೆ.
ಆಕೆಯ ಸಾವಿಗೆ ಕಾರಣನಾದ ಶೇಖ್ ಅಕೀಬ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಬಂಧಿಸಬೇಕು. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೋಷಕರ ದೂರಿನ ಪ್ರಕಾರ, “ಶೇಖ್ ಅಕೀಬ್ ಎಂಬಾತ ತನ್ನನ್ನು ಪ್ರೀತಿಸುವಂತೆ ಕಳೆದ 10 ತಿಂಗಳಿನಿಂದ ಬಾಲಕಿಯ ಬೆನ್ನತ್ತಿದ್ದ. ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕೈ ಕೊಯ್ದುಕೊಳ್ಳುತ್ತೇನೆಂದು ಬೆದರಿಸಿ ತನ್ನ ಪ್ರೀತಿಗೆ ಬೀಳಿಸಿಕೊಂಡಿದ್ದ. ಅಲ್ಲದೆ, ತನ್ನ ಕಾರಿನಲ್ಲಿ ಸುತ್ತಾಡಿಸುತ್ತಿದ್ದ” ಎಂದು ಆರೋಪಿಸಲಾಗಿದೆ.
“ಅದನ್ನು ಗಮನಿಸಿ, ಯುವಕನ ಮನೆಯರನ್ನು ಕರೆದು ಆತನಿಗೆ ಬುದ್ದಿ ಹೇಳುವಂತೆ ಹೇಳಿದ್ದೆವು. ನಮ್ಮ ಮಗಳಿಂದ ದೂರ ಉಳಿಯುವಂತೆ ಬುದ್ದಿ ಹೇಳಿದ್ದೆವು. ಆದರೂ, ಆತ ತನ್ನ ದುರ್ವರ್ತನೆ ಬದಲಾಯಿಸಿಕೊಳ್ಳದೆ ನನ್ನ ಅಪ್ರಾಪ್ತ ಮಗಳನ್ನು ಪೀಡಿಸುವುದು, ಛೇಡಿಸುವುದು, ಹಲವು ಫೋನ್ ನಂಬರ್ಗಳಿಂದ ಫೋನ್ ಮಾಡಿ ತೊಂದರೆ ಕೊಡುತ್ತಿದ್ದ. ಈ ಬಗ್ಗೆ ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದೆವು” ಎಂದು ತಿಳಿಸಿದ್ದಾರೆ.
ಇದೆಲ್ಲದರ ನಡುವೆ, ಬಾಲಕಿಯ ತಾಯಿಗೆ ಫೋನ್ ಪೇ ಮೂಲಕ 10,000 ರೂ. ಹಣವನ್ನೂ ಹಾಕಿದ್ದಾನೆ. ಆ ಮೂಲಕ ತನ್ನ ಪ್ರೀತಿಗೆ ಬಾಲಕಿಯ ತಾಯಿಯ ಬೆಂಬಲವೂ ಇತ್ತೆಂಬುದನ್ನು ತೋರಿಸಲು ಕುತಂತ್ರ ಹೆಣೆದಿದ್ದಾನೆ. ಅದರೆ, ಆತ ಹಣ ಹಾಕಿದ ಮರುಕ್ಷಣವೇ ಆತನಿಗೆ ಹಣವನ್ನು ವಾಪಸ್ ಹಾಕಿದ್ದಾರೆ. ಪದೇ-ಪದೇ ಹಣ ಹಾಕಿ ತೊಂದರೆ ಕೊಟ್ಟಿದ್ದಾನೆ.
“ಬಾಲಕಿಯನ್ನು ಕಾರಿನಲ್ಲಿ ಸುತ್ತಾಡಿಸಿ, ಪ್ರೀತಿಯ ಹೆಸರಿನಲ್ಲಿ ಆಕೆಯ ಜೊತೆ ದೈಹಿಕ ಸಂಬಂಧವನ್ನೂ ಬೆಳೆಸಿದ್ದಾನೆ. ಆಕೆ ಗರ್ಭಿಣಿಯಾಗಿದ್ದಾನೆ. ಇತ್ತೀಚೆಗೆ, ಆಕೆಯ ಚಲನ-ವಲನ ಬದಲಾಗಿತ್ತು. ಹೀಗಾಗಿ, ಅನುಮಾನಗೊಂಡು ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿರುವುದು ಗೊತ್ತಾಯಿತು. ತಾನು ಗರ್ಭಿಣಿಯಾಗಿದ್ದೇನೆಂದು ತಿಳಿದ ಬಾಲಕಿ ಯಾರು ಇಲ್ಲಾದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಪೋಷಕರು ತಿಳಿಸಿದ್ದಾರೆ.
ತಮ್ಮ ಮಗಳ ಸಾವಿಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಮೊದಲಿಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರೆಂದು ಆರೋಪಿಸಲಾಗಿದೆ. ಸದ್ಯ, ಪೊಲೀಸ್ ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.