ನಾಗಮಂಗಲ ಪೋಲಿಸರು ಮೂವರು ಸರಗಳ್ಳರನ್ನು ಬಂಧಿಸಿ, 10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ.
ಬಿಹಾರ ಮೂಲದ ಅಮಿತ್ ಕುಮಾರ್, ಕೆ.ಆರ್.ಪೇಟೆ ತಾಲ್ಲೂಕಿನ ಬಿಲ್ಲೇನಹಳ್ಳಿಯ ಬಿ.ವಿ.ಸಂತೋಷ್ ಅಲಿಯಾಸ್ ಪರಾಕ್ ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನ ಸಿಂಗಾಪುರ ಗ್ರಾಮದ ಎ.ಎಸ್.ಮಂಜೇಗೌಡ ಸರಗಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳು.
ಕಳೆದ 18.7.2022 ರಂದು ನಾಗಮಂಗಲ ಪಟ್ಟಣದ ಮೈಸೂರು ಮುಖ್ಯ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು, ಮಹಿಳೆಯ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಬ್ಯಾಗಿನಲ್ಲಿದ್ದ 76.5 ಗ್ರಾಂ ಚಿನ್ನಾಭರಣ, 2.15 ಲಕ್ಷ ನಗದು ಹಾಗೂ ಮೊಬೈಲ್ ಇತ್ತು. ಈ ಬಗ್ಗೆ ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ 6.12.2022 ರಂದು ನಾಗಮಂಗಲ ತಾಲ್ಲೂಕಿನ ಅರಕೆರೆ ಗ್ರಾಮದ ಮಹಿಳೆಯೊಬ್ಬರು ಹಸುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಇಬ್ಬರು, ಆಕೆಯ ಕತ್ತಿನಲ್ಲಿದ್ದ 44 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 208 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 1 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ನಾಗಮಂಗಲ ಟೌನ್ ಹಾಗೂ ಗ್ರಾಮಾಂತರ ಪೋಲಿಸರು ಮೂವರು ಸರಗಳ್ಳರನ್ನು ಬಂಧಿಸಿದ್ದಾರೆ.