ಪ್ರಧಾನ ಮಂತ್ರಿ ಮೋದಿಯವರು ಲೋಕಸಭಾ ಚುನಾವಣೆಗಳನ್ನು ಅತಿ ಸುದೀರ್ಘವಾದ ಏಳು ಹಂತಗಳಲ್ಲಿ ನಡೆಸುವಂತೆ ಚುನಾವಣಾ ಆಯೋಗದ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಿ ಏರ್ಪಾಡು ಮಾಡಿಕೊಂಡಿರುವುದು ಗುಪ್ತವಾದ ವಿಚಾರವಾಗಿ ಉಳಿದಿಲ್ಲ.
ಕಳೆದ ಬಾರಿಯ ಚುನಾವಣೆಗಳಲ್ಲಿ ” ಮೋದಿ ಅಲೆ” ಬೀಸುತ್ತಿದ್ದ ಕಾರಣ ಏಳು ಹಂತಗಳ ಈ ಫಾರ್ಮುಲಾ ಕೆಲಸ ಮಾಡಿತ್ತು, ಮೋದಿಜೀ ಪ್ರತಿ ಹಂತದ ಚುನಾವಣೆಯಲ್ಲೂ ದೇಶದ ಎಲ್ಲೆಡೆ ಸುತ್ತಿ ಭಾಷಣ,ರೋಡ್ ಶೋ ಏರ್ಪಡಿಸಿ ಮತದಾರರಲ್ಲಿದ್ದ ಮೋದಿ ಅಲೆಯನ್ನು ಮತ್ತಷ್ಟು ಹುಚ್ಚೆಬ್ಬಿಸಿ, ಅಲೆ ಮತ್ತಷ್ಟು ಗಟ್ಟಿಯಾಗಿ ಸುನಾಮಿ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಕಳೆದ 2014 ಮತ್ತು 2019 ಚುನಾವಣೆಯಲ್ಲಿ ಬಳಸಿದ ತಂತ್ರವನ್ನೇ ಮತ್ತೆ ಪುನರಾವರ್ತಿತ ಮಾಡಲು ನೋಡಿದ ಮೋದಿಜೀ ಈ ಬಾರಿ ಸಹ ಚುನಾವಣಾ ಆಯೋಗದ ಸಹಾಯದಿಂದ ಏಳು ಹಂತದ ಚುನಾವಣೆಗಳನ್ನು ಏರ್ಪಡಿಸಿ ಕೊಂಡರು.ಆದರೆ ವಾಸ್ತವದಲ್ಲಿ ಈ ಬಾರಿ ದೇಶದಲ್ಲಿ ಮೋದಿ ಅಲೆ ಇರಲೇ ಇಲ್ಲ.ರಾಮಮಂದಿರ,ಹಿಂದೂ-ಮುಸ್ಲಿಂ ದ್ವೇಷವನ್ನು ದೇಶದ ಜನರು ಎಷ್ಷು ವರ್ಷ ಅಂತ ಕೇಳುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ಯುವ ಜನರ ನಡುವೆ ನಿರುದ್ಯೋಗದ ಸಮಸ್ಯೆ, ರೈತರ ನಡುವೆ ಎಂಎಸ್ಪಿ ಸಮಸ್ಯೆ,ಕಾರ್ಮಿಕರ ನಡುವೆ ಮುಚ್ಚುತ್ತಿರುವ ಕಾರ್ಖಾನೆಗಳ ಸಮಸ್ಯೆ,ಜನ ಸಾಮಾನ್ಯರ ನಡುವೆ ಬೆಲೆಯೇರಿಕೆ ಸಮಸ್ಯೆಯಂತಹ ಗಂಭೀರವಾದ ಸಮಸ್ಯೆಗಳು ಮುನ್ನೆಲೆಗೆ ಬಂದು ಮೋದಿಜೀ ಅಲೆ ಕಡಿಮೆ ಆಗುವಂತೆ ಮಾಡಿದೆ.
ಇದರ ಜೊತೆಗೆ ವಿರೋಧ ಪಕ್ಷಗಳ ಆಕ್ರಮಣಕಾರಿ ಚುನಾವಣಾ ತಂತ್ರ ಮೋದಿಜೀ ತಾನಾಶಾಯೀ, ಸರ್ವಾಧಿಕಾರಿ, ಮೋದಿಜೀ ಸಂವಿಧಾನ ಬದಲಾಯಿಸುತ್ತಾರೆ,ಧರ್ಮಗಳ ನಡುವೆ ದ್ವೇಷ ಹರಡುತ್ತಾರೆ, ಮೋದಿಜೀ ಕೆಲಸಕ್ಕಿಂತ ಮಾತು ಜಾಸ್ತಿ ಅಂತೆಲ್ಲಾ ಹೇಳಿ ಇದ್ದಬದ್ದ ಮೋದಿಜೀ ಅಲೆಯನ್ನು ಕೆಳಕ್ಕೆ ಇಳಿಸಿದ್ದಾರೆ.
ಇದರ ಜೊತೆಗೆ ಪ್ರತಿ ಮಹಿಳೆಗೆ ಒಂದು ಲಕ್ಷ ರೂ.ಗ್ಯಾರಂಟಿಯ ಭಾಗ್ಯಲಕ್ಷ್ಮಿ ಯೋಜನೆ ಪ್ರಕಟಿಸುವ ಮೂಲಕ ಮಹಿಳಾ ಮತದಾರರನ್ನು,ಉದ್ಯೋಗ ನೀಡುವ ಭರವಸೆ ಮೂಲಕ ಯುವ ಜನರನ್ನು ಮೋದಿಜೀ ಯಿಂದ ಬೇರ್ಪಡಿಸಿ ಬಿಟ್ಟಿದ್ದಾರೆ.ಈ ಎಲ್ಲಾ ಕಾರಣದಿಂದ ತಮ್ಮ ಪರವಾದ ಅಲೆ ಇಲ್ಲದ ವಾತಾವರಣದಲ್ಲಿ ಸುದೀರ್ಘ ಏಳು ಹಂತದ ಚುನಾವಣೆಗೆ ಅಲೆ ಎಬ್ಬಿಸಲು ಮೋದಿಜೀ ದಿನಕೊಂದು,ಕ್ಷಣಕ್ಕೊಂದು ಗೊಂದಲಕಾರಿ ಭಾಷಣ ಮಾಡುತ್ತಾ ಓಡಾಡುತ್ತಿರುವ ಪ್ರಧಾನಿಗಳು ಸುಸ್ತಾದಂತೆ,ದಣಿದಂತೆ ಕಾಣುತ್ತಾ ತಾವೇ ಹೆಣೆದ ಏಳು ಹಂತಗಳ ಚುನಾವಣಾ ಬಲೆಗೆ ಬಿದ್ದಂತೆ ಕಾಣುತ್ತಿದ್ದಾರೆ.