ಮಂಡ್ಯ ತಾಲ್ಲೂಕಿನ ಮಾಡಲ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆ ಸ್ಥಾಪಿತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬೃಂದಾವನವನ್ನು ಗ್ರಾಮಸ್ಥರು ಸ್ವಚ್ಛ ಗೊಳಿಸಿ ಹೊಸರೂಪ ನೀಡಿದ್ದಾರೆ.
ನೂರಾರು ವರ್ಷಗಳ ಹಿಂದೆ ಮಾಧ್ವ ಪರಂಪರೆಯಲ್ಲಿ ನಿರ್ಮಾಣವಾಗಿದ್ದ ಬೃಂದಾವನ ಕಾಲ ಕಳೆದಂತೆ ನಿರ್ಲಕ್ಷ್ಯಕ್ಕೆ ಒಳಗಾಗಿ ಗಿಡ ಗಂಟೆಗಳು ಬೆಳೆದು ಮುಚ್ಚಿಹೋಗಿತ್ತು.
ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್ ಅವರು ಮಾಡಲ ಗ್ರಾಮದಲ್ಲಿ ಹೋಗುತ್ತಿದ್ದಾಗ ಗಿಡ ಗಂಟೆಗಳಿಂದ ಮುಚ್ಚಿಹೋಗಿದ್ದ ಬೃಂದಾವನವನ್ನು ಗಮನಿಸಿ, ಗ್ರಾಮಸ್ಥರ ಸಹಕಾರದೊಂದಿಗೆ ಬೃಂದಾವನದ ಸುತ್ತ ಮುತ್ತ ಸ್ವಚ್ಚಗೊಳಿಸಿ ಹೊಸ ರೂಪ ಕೊಟ್ಟಿದ್ದಾರೆ. ಕಂದಾಯ ಇಲಾಖೆಯಲ್ಲಿ ಮಾಹಿತಿ ಕಲೆ ಹಾಕಿದಾಗ 43×58 ಜಾಗ ಬೃಂದಾವನದ ಹೆಸರಿನಲ್ಲಿ ಜಾಗ ಇರುವುದು ಗೊತ್ತಾಗಿದೆ.
ಬೃಂದಾವನಕ್ಕೆ ಸೇರಿದ ಜಾಗವನ್ನು ಸಂಪೂರ್ಣ ಸ್ವಚ್ಛ ಗೊಳಿಸಿದ ಬಳಿಕ ಇತಿಹಾಸ ತಿಳಿಸಿದಾಗ, ಮಾಡಲ ಗ್ರಾಮಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಈಗಾಗಲೇ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು, ಮಂತ್ರಾಲಯ ಕ್ಷೇತ್ರದ ಸುಬುಧೇಂದ್ರ ತೀರ್ಥರು ಮಾಡಲ ಗ್ರಾಮಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಪುರಾಣ ಐತಿಹ್ಯದ ಬಗ್ಗೆ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಗಮನಕ್ಕೆ ತಂದಾಗ ಸ್ಥಳಕ್ಕೆ ಭೇಟಿ ನೀಡಿ, ಬೃಂದಾವನವನ್ನು ವೀಕ್ಷಿಸಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ನಂತರ ಮಾಧ್ವ ಪರಂಪರೆಯಲ್ಲಿ ಕಟ್ಟುನಿಟ್ಟಿನ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬೃಂದಾವನದ ಸುತ್ತ ಕಾಂಪೌಂಡ್ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಭರವಸೆ ನೀಡಿದರು.
ಒಟ್ಟಾರೆ ಮುಂದಿನ ದಿನಗಳಲ್ಲಿ ಮಾಡಲ ಗ್ರಾಮದ ಬೃಂದಾವನ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡು ಭಕ್ತರನ್ನು ಸೆಳೆಯಲಿದೆ.
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸಮ್ಮುಖದಲ್ಲಿ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ಒಂದು ತಾಸಿಗೂ ಹೆಚ್ಚು ಕಾಲ ನಡೆದ ಪೂಜೆಯಲ್ಲಿ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿ ಧನ್ಯರಾದರು. ಕಳೆದ ಮೂರು ಹುಣ್ಣಿಮೆಯಿಂದ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರುತಿದ್ದು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ನೆರವೇರಿಸುತಿದ್ದಾರೆ.
ಅಭಿವೃದ್ಧಿಗೆ ಆದ್ಯತೆ
ಇದೇ ವೇಳೆ ಮಾತನಾಡಿದ ಶಾಸಕ ಪುಟ್ಟರಾಜು, ಬೃಂದಾವನವನ್ನು ಮಂತ್ರಾಲಯದ ಪುಣ್ಯ ಕ್ಷೇತ್ರದಲ್ಲಿ ನೋಡುತ್ತಿದ್ದೆವು. ಅದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯ ಮಾಡಲ ಗ್ರಾಮದಲ್ಲಿ ನೋಡುತ್ತಿದ್ದೇವೆ,
ಕನ್ನಡಪರ ಹೋರಾಟಗಾರ ಮಂಜುನಾಥ ಬೃಂದಾವನವನ್ನು ನೋಡಿ ಗುರುತಿಸಿದ್ದಾರೆ.ಕ್ಷೇತ್ರದ ಶಾಸಕನಾಗಿ ಬೃಂದಾವನದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ.ಸುತ್ತಲೂ ಗೋಡೆ ನಿರ್ಮಾಣ,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಮನ್ಮುಲ್ ಅಧ್ಯಕ್ಷ ರಾಮಚಂದ್ರ, ಕನ್ನಡ ಸೇನೆ ಮಂಜುನಾಥ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.