ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿಗೆ ಜಮೀನು ನೀಡಿರುವ ನಮಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ನಮಗೆ ಹೆಚ್ಚುವರಿ ಪರಿಹಾರ ನೀಡದಿದ್ದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರೈತ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ತಾಲೂಕಿನ ಇಂಡವಾಳು ಗ್ರಾಮದಲ್ಲಿ ಇಂದು ಬೆಳಿಗ್ಗೆ ಪೊಲೀಸರ ರಕ್ಷಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಗಡಿ- ಮಳಿಗೆ ತೆರವುಗೊಳಿಸಲು ಮುಂದಾದ ಸಂದರ್ಭದಲ್ಲಿ ರೈತ ರಾಜೇಗೌಡ ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು.
ಜಮೀನು ಕಳೆದುಕೊಂಡವರಿಗೆ ಕಡಿಮೆ ಪರಿಹಾರ ನೀಡಿ, ಕಮಿಷನ್ ಕೊಟ್ಟವರಿಗೆ ಹೆಚ್ಚು ಪರಿಹಾರ ನೀಡಲಾಗಿದೆ.ಇದನ್ನು ಸರಿಪಡಿಸದೆ ಇಂದು ಬೆಳಿಗ್ಗೆ ಪೊಲೀಸರ ರಕ್ಷಣೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ಅಂಗಡಿ ಮಳಿಗೆ ನೆಲಸಮ ಮಾಡಿದ್ದಾರೆ.
ನಮ್ಮ ಜಮೀನು ಪಡಿಸಿಕೊಂಡು ಕೇವಲ 50 ಲಕ್ಷ ಹಣ ನೀಡಿದ್ದಾರೆ. ಕೆಲವು ಪ್ರಭಾವಿಗಳು ಕಮಿಷನ್ ನೀಡಿ 10-20 ಕೋಟಿ ಹಣ ಪಡೆದುಕೊಂಡಿದ್ದಾರೆ. ಆದರೆ ನಮ್ಮ ಜಮೀನಿಗೆ ಕಡಿಮೆ ಪರಿಹಾರ ಹಣ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಸ್ವಾದೀನ ಅಧಿಕಾರಿಗಳು ಮತ್ತು ಯೋಜನಾ ನಿರ್ದೇಶಕರು ಬೆಳಗಿನ ಜಾವ ನಾಲ್ಕು ಗಂಟೆಗೆ ಜೆಸಿಬಿ ಮುಖಾಂತರ ಅಂಗಡಿ ಮಳಿಗೆ ಕೆಡವಲು ಬಂದಿದ್ದಾರೆ. ನಾವೇನು ಪಾಕಿಸ್ತಾನದವರಾ? ಇಷ್ಟೊಂದು ತರಾತುರಿಯಲ್ಲಿ ನೆಲಸಮ ಮಾಡಲು ಏಕೆ ಬರಬೇಕಿತ್ತು ಎಂದು ಕಿಡಿಕಾರಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಈಗಾಗಲೇ ಈ ಸಂಬಂಧ ಸಭೆ ನಡೆಸಿ ಹೆಚ್ಚುವರಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ
ಇಂದು ಏಕಾಏಕಿ ನೆಲಸಮ ಮಾಡಲಾಗಿದೆ. ಇದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಯೇ ಕಾರಣ ಎಂದರು.
ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ನಾನು ಹೃದಯ ರೋಗಿಯಾಗಿದ್ದು,ಹೆಚ್ಚುವರಿ ಪರಿಹಾರ ನೀಡದಿದ್ದರೆ ಅಧಿಕಾರಿಗಳು ಹಾಗೂ ಪೊಲೀಸರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ರಾಜೇಗೌಡ ಎಚ್ಚರಿಕೆ ನೀಡಿದರು.