ಮದ್ದೂರಿನ ಜ್ಯೂವೆಲರಿ ಶಾಪ್ (ಒಡೆವೆ ಅಂಗಡಿ) ಮಾಲೀಕನ ಮಗನನ್ನು ಹೆದರಿಸಿ, ಆತನಿಂದ ಹಣ ಹಾಗೂ ಒಡವೆಗಳನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಮದ್ದೂರು ಪೊಲೀಸರು ಬಂಧಿಸಿದ್ದು, ಆತನಿಂದ 2 ಲಕ್ಷ ರೂ. ಹಣ, 307 ಗ್ರಾ.ಚಿನ್ನಾಭರಣ ಸೇರಿದಂತೆ ಒಟ್ಟು ₹ 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ
ಕಳೆದ ಡಿ.18 ರಂದು ಮದ್ದೂರು ಟೌನ್ನ ಟೀಚರ್ ಕಾಲೋನಿಯ ನಿವಾಸಿ ಜ್ಯೂವೆಲರಿ ಶಾಪ್ನ ಮಾಲೀಕರೊಬ್ಬರು ಮದ್ದೂರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿ, ನನ್ನ ಮಗನ ಸ್ನೇಹಿತನೊಬ್ಬ 2021ರ ಜುಲೈನಿಂದ 2022ರ ನವೆಂಬರ್ ವರೆಗಿನ ಅವಧಿಯ ನಡುವೆ ನನ್ನ ಮಗನನ್ನು ಹೆದರಿಸಿ ನಮ್ಮ ಜ್ಯೂವೆಲರಿ ಅಂಗಡಿಯಲ್ಲಿ ಗ್ರಾಹಕರಿಂದ ಅಡವಿರಿಸಿಕೊಂಡು, ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲಿಟ್ಟಿದ್ದ ಚಿನ್ನದ ಒಡವೆಗಳ ಪ್ಯಾಕೆಟ್ ಗಳನ್ನು ಪಡೆದು ಸುಲಿಗೆ ಮಾಡಿದ್ದಾರೆಂದು ದೂರು ನೀಡಿದ್ದರು.
ಈ ಪ್ರಕರಣದ ಪತ್ತೆಗಾಗಿ ಪೊಲೀಸ್ ಇನ್ಸಪೆಕ್ಟರ್ ಸಂತೋಷ್ ಎಸ್., ಪಿ.ಎಸ್.ಐ.ಗಳಾದ ನರೇಶ್ ಕುಮಾರ್, ಉಮೇಶ ಆರ್. ಬಿ. ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡವು ಚನ್ನಪಟ್ಟಣ ತಾಲ್ಲೂಕಿನ ಮುದುಗೆರೆ ಗ್ರಾಮದ ಆರೋಪಿಯನ್ನು ಪತ್ತೆ ಮಾಡಿ, ಬಂಧಿಸಿದೆ.
ಈತ ರಾಮನಗರ ಜಿಲ್ಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈಗಾಗಲೇ ಕೊಲೆ ಪ್ರಕರಣದಲ್ಲಿ ಆರೋಪಿತನಾಗಿ ರಾಮನಗರ ಜಿಲ್ಲಾ ಕಾರಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿದ್ದ ಎಂಬುದು ತಿಳಿದು ಬಂದಿದೆ.
ಆರೋಪಿಯನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದ್ದು, ವಿಚಾರಣಾ ಕಾಲದಲ್ಲಿ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಒಡವೆ ಅಂಗಡಿ ಮಾಲೀಕನ ಮಗನಿಂದ ಸುಲಿಗೆ ಮಾಡಿದ್ದ 307 ಗ್ರಾಂ. ತೂಕದ ಚಿನ್ನದ ಒಡವೆಗಳು ಹಾಗೂ ರೂ 2 ಲಕ್ಷ ರೂ. ನಗದು ಹಣ ಸೇರಿದಂತೆ ಒಟ್ಟು 20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮದ್ದೂರು ಪೊಲೀಸ್ ಠಾಣಾ ಈ ಕಾರ್ಯಾಚರಣೆಯನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಶ್ಲಾಘಿಸಿದ್ದಾರೆ.