ನಾಡಿನ ಜನತೆಗಾಗಿ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ಆಗದಿದ್ದರೆ ನಿಮ್ಮ ಮುಂದೆ ಮತ್ತೆಂದೂ ಮತ ಕೇಳಲು ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾನ ನೀಡಿದರು.
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡತನ ಹೋಗಲಾಡಿಸಲು ಆಗಿಲ್ಲ.ರೈತರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ.ಯುವಕರಿಗೆ ಉದ್ಯೋಗ ಇಲ್ಲ.ಮಹಿಳೆಯರ ನೋವನ್ನು ಹತ್ತಿರದಿಂದ ನೋಡಿದ್ದೇನೆ. ಇದಕ್ಕೆಲ್ಲ ಪರಿಹಾರ ನೀಡಲು ಪಂಚರತ್ನ ಯೋಜನೆ ಜಾರಿಗೆ ತರಲು ಅನಾರೋಗ್ಯದ ನಡುವೆಯೂ ನಿಮ್ಮ ಬಳಿಗೆ ಬಂದಿದ್ದೇನೆ.ಪಂಚರತ್ನ ಯೋಜನೆಗಳನ್ನು ಜಾರಿಗೆ ತರದಿದ್ದರೆ ಮತ್ತೆಂದೂ ನಿಮ್ಮ ಮನೆ ಬಾಗಿಲಿಗೆ ಮತ ಕೇಳಲು ಬರಲ್ಲ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಸಾಲ ಮನ್ನಾ ಮಾಡಿದ್ದೆ. ಸಾಲಮನ್ನಾದಿಂದ ರೈತರಿಗೆ ಶಾಶ್ವತವಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.ಹಾಗಾಗಿ ರೈತರು ಸ್ವಾವಲಂಬಿಯಾಗಿ ಬದುಕಲು ರೈತಬಂಧು ಯೋಜನೆ ತರಲು ಹೊರಟಿದ್ದೇನೆ. ಪಂಚರತ್ನ ಯೋಜನೆಯನ್ನು ಜಾರಿಗೆ ತರಲು ಬಿಜೆಪಿ,ಕಾಂಗ್ರೆಸ್ ನಿಂದ ಸಾಧ್ಯವಿಲ್ಲ. ಮಣ್ಣಿನ ಮಕ್ಕಳ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಆಶೀರ್ವಾದ ಬೇಕೆಂದರು.
ಗುಣವಂತ ನಾಯಕ
ಪುಟ್ಟರಾಜು ಶಾಸಕನಾಗಿ ಕೆಲಸ ಮಾಡದೇ ಮನೆ ಮಗನಾಗಿ ಕೆಲಸ ಮಾಡ್ತಾರೆ.ಶಾಸಕ ಪುಟ್ಟರಾಜು ಒಬ್ಬ ಗುಣವಂತ ನಾಯಕನಾಗಿದ್ದು, ಮತ್ತೊಮ್ಮೆ ಶಾಸಕರಾಗಿ ಪುಟ್ಟರಾಜುರನ್ನ ಆಯ್ಕೆ ಮಾಡಿ ಕಳುಹಿಸಿ ಎಂದು ರೈತ ಬಂಧುಗಳನ್ನು ಕೇಳಿಕೊಂಡರು.
ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ.ನಮಗೆ ಸಂಪೂರ್ಣ ಬಹುಮತ ಸರ್ಕಾರ ನೀಡಲಿಲ್ಲ.ಆದರೂ ಕಬ್ಬಿಗೆ ಸಾವಿರಾರು ಕೋಟಿ ಪರಿಹಾರ ಕೊಟ್ಟೆ.ಇದೀಗ ರೈತರು 48 ದಿನದಿಂದ ಅಹೋರಾತ್ರಿ ಧರಣಿ ಮಾಡ್ತಿದ್ದಾರೆ. ಆದ್ರೆ ವಿಧಾನಸೌಧಕ್ಕೆ ಕರೆದು ಮಾತನಾಡುವ ಕೆಲಸ ಬಿಜೆಪಿ ಸರ್ಕಾರ ಮಾಡ್ತಿಲ್ಲ.ಪಾಂಡವಪುರ, ಮದ್ದೂರು, ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲಿಸಬೇಕಂತೆ.ಬಿಜೆಪಿಯವರನ್ನ ಏತಕ್ಕೆ ಗೆಲ್ಲಿಸಬೇಕು ಜೆಡಿಎಸ್ ಗೆ ಸಂಪೂರ್ಣ ಬಹುಮತ ಸರ್ಕಾರ ನೀಡಿ, ರೈತರ ಸಾಲ ಮನ್ನಾ ಮಾಡ್ತೇನೆ ಎಂದರು.
ಆನ್ ಲೈನ್ ರಮ್ಮಿ ಬಂದ್
ಆನ್ ಲೈನ್ ರಮ್ಮಿ ಬಂದ್ ಮಾಡಿ,ನಮ್ಮ ಹುಡುಗರು ಹಾಳಾಗುತ್ತಿದ್ದಾರೆ ಎಂಬ ಪೋಷಕರೊಬ್ಬರ ಮನವಿ ಸ್ಪಂದಿಸಿದ ಕುಮಾರಸ್ವಾಮಿ, ನಾನು 2006 ರಲ್ಲಿ ಆನ್ ಲೈನ್ ಲಾಟರಿ ನಿಲ್ಲಿಸಿದ್ದೆ. ನಮ್ಮ ಸರ್ಕಾರ ಬಂದ್ಮೇಲೆ ಆನ್ ಲೈನ್ ಕ್ರಿಕೆಟ್, ಆನ್ ಲೈನ್ ರಮ್ಮಿ ನಿಷೇಧ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಸಿಎಂ ಆಗುವುದು ಖಚಿತ
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ,ಪಾಂಡವಪುರ ತಾಲೂಕಿಗೆ ಸಚಿವ ಸ್ಥಾನ ನೀಡುವ ಮೂಲಕ ಶಾಪವನ್ನು ವಿಮೋಚನೆ ಮಾಡಿದ್ದು ದೇವೇಗೌಡ ಅಪ್ಪಾಜಿ ಮತ್ತು ಕುಮಾರಣ್ಣ.ಸೂರ್ಯ-ಚಂದ್ರರ ಸಾಕ್ಷಿಯಾಗಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಎಂದರು.
ಕೆ.ಎಸ್.ಪುಟ್ಟಣ್ಣಯ್ಯ ಪುತ್ಥಳಿಗೆ ಮಾಲಾರ್ಪಣೆ
ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯನವರ ಪ್ರತಿಮೆಗೆ ಎಚ್ಡಿಕೆ ಮಾಲಾರ್ಪಣೆ ಮಾಡಿದರು. ಪಂಚರತ್ನ ರಥಯಾತ್ರೆ ವಾಹನದಿಂದ ಕೆಳಗಿಳಿದೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಗೆ ಜೈಕಾರ ಮೊಳಗಿಸಿದರು.
ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಟಿ
ರೈತ ನಾಯಕ ಪುಟ್ಟಣ್ಣಯ್ಯ ತವರೂರಿಗೆ ಆಗಮಿಸಿದ ಪಂಚರತ್ನ ಯಾತ್ರೆಯಲ್ಲಿ ಹೆಲಿಕಾಪ್ಟರ್ ಮೂಲಕ ಹೆಚ್ಡಿಕೆಗೆ ಪುಷ್ಪವೃಷ್ಟಿ ಸಮರ್ಪಣೆ ಮಾಡಲಾಯಿತು.ಕ್ರೇನ್ ಮೂಲಕ ಬೃಹತ್ ಕಬ್ಬಿನ ಹಾರ ಅರ್ಪಣೆ ಮಾಡುವ ಮೂಲಕ ಅಭಿಮಾನಿಗಳು ಅಭಿಮಾನ ಮೆರೆದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮುಖಂಡ ಪ್ರವೀಣ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.