ಭಾರತ ವಿಭಜನೆಯು ಕರಾಳ ಅಧ್ಯಾಯವಾಗಿ ಇತಹಾಸದ ಪುಟಗಳಲ್ಲಿ ದಾಖಲಾಗಿದೆ. ವಿಭಜನೆಯ ಸಂದರ್ಭಗಳ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ಅದರ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಎಸ್ಬಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ತಿಳಿಸಿದರು.
ಮಂಡ್ಯ ನಗರದ ಎಸ್ಬಿಐ ಬ್ಯಾಂಕಿನಲ್ಲಿ ಭಾರತ ವಿಭಜನೆ ಕರಾಳ ದಿನದ ಅಂಗವಾಗಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದಾರೆ. ಅವರ ಆದರ್ಶ, ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಭಾರತ ವಿಭಜನೆಯ ಕರಾಳ ದಿನವನ್ನು ಘೋಷಣೆ ಮಾಡಲಾಗಿದೆ.
ವಿಭಜನೆ ಕಾಲದಲ್ಲಿ ನಮ್ಮ ಸಹೋದರ, ಸಹೋದರಿಯರು ಅನುಭವಿಸಿದ ಯಾತನೆಗಳನ್ನು ತಿಳಿಸಲು ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಟಿ.ಚಂದ್ರು ಮಾತನಾಡಿ, ರಾಜಕೀಯ ಇಂದು ಭ್ರಷ್ಟಾಚಾರದಿಂದ ಕೂಡಿದೆ. ಹಣ ಹಂಚುವ ಮೂಲಕ ಮತಗಳನ್ನು ಕೊಂಡುಕೊಳ್ಳುವುದಕ್ಕೆ ಪ್ರಾಮುಖ್ಯತೆ ನೀಡಲಾಗಿರುವುದು ದುರಂತದ ವಿಷಯ. ಇಂತಹವರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಬಿಐ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರಾದ ಇಂದ್ರೇಶ್, ಪ್ರಾಚಿಗುಪ್ತ, ನಿವೃತ್ತ ಸೈನಿಕ ರವೀಂದ್ರ, ಸಿಬ್ಬಂದಿಗಳು ಮತ್ತು ನೌಕರರು ಭಾಗವಹಿಸಿದ್ದರು.