ವರ್ಷಕ್ಕೊಮ್ಮೆ ಕುಟುಂಬದ ಹಿರಿಯರಿಗೆ ಎಡೆಯಿಟ್ಟು ಪೂಜೆ ಸಲ್ಲಿಸುವ ಸಲ್ಲಿಸುವ ಪಿತೃಪಕ್ಷ (ಮಹಾಲಯ ಅಮಾವಾಸ್ಯೆ) ನಾಳೆ(ಅ.14) ಮಂಡ್ಯ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ನಡೆಯಲಿದೆ, ಇದರ ಸಿದ್ದತೆಗಾಗಿ ಮಂಡ್ಯನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ಸಂಜೆ ಹಬ್ಬದ ಆಚರಣೆಗೆ ಬೇಕಾದ ಸಾಮಾಗ್ರಿಗಳ ಖರೀದಿಯ ಭರಾಟೆ ಜೋರಾಗಿತ್ತು.
ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಹಣ್ಣು-ಹಂಪಲುಗಳು, ಸಿಹಿ ತಿನಿಸುಗಳು, ಎಡೆ ಇಡುವ ಸಾಮಾಗ್ರಿಗಳು, ಕುಟುಂಬದ ಸದಸ್ಯರಿಗೆ ಹೊಸಬಟ್ಟೆಗಳ ಖರೀದಿಗೆ ಜನಸಾಮಾನ್ಯರು ಮುಗಿಬಿದ್ದಿದ್ದು ನಗರದಲ್ಲಿ ಕಂಡು ಬಂತು.
ಮನೆಯನ್ನು ಒಪ್ಪ ಓರಣ ಮಾಡಿ ಸಿಂಗರಿಸಿ ಕುಟುಂಬದಲ್ಲಿ ನಿಧನರಾದ ತಂದೆ-ತಾಯಿ ಗುರು ಹಿರಿಯರ ಸಮಾದಿಗೆ ಪೂಜೆ ಸಲ್ಲಿಸುವುದನ್ನು ಪಿತೃಪಕ್ಷದಲ್ಲಿ ಎಲ್ಲೆಡೆ ಕಾಣಬಹುದು, ಅಂದು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ಕುಟುಂಬ ಹಿರಿಯರಿಗೆ ಸಮಾದಿಗಳು ಅಥವಾ ಅವರ ಅಂತ್ಯಕ್ರಿಯೆ ನಡೆದ ಸ್ಥಳಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಮಂಡ್ಯದಲ್ಲಿ ಪಿತೃಪಕ್ಷವೆಂಬರೆ ವಿಶೇಷವಾದ ಮಾಂಸಾಹಾರ ತಯಾರಿಸಿ ಎಡೆಯಿಕ್ಕುವುನ್ನು ಎಲ್ಲೆಡೆ ಕಾಣಬಹುದು. ಸಾಮಾನ್ಯವಾಗಿ ಜಿಲ್ಲೆ ಪಿತೃಪಕ್ಷವನ್ನು ಮಹಾಲಯ ಅಮಾವಾಸ್ಯೆ ದಿನವಲ್ಲದೇ ಈ ಸಂದರ್ಭದ ಹಿಂದಿನ ಹಾಗೂ ಮುಂದಿನ ದಿನಗಳಲ್ಲಿ ಆಚರಿಸುವುದು ವಾಡಿಕೆಯಾಗಿದೆ. ಒಟ್ಟಿನಲ್ಲಿ ಆಯುಧಪೂಜೆಯವರೆಗೆ ಒಂದಲ್ಲ ಒಂದು ಸಮುದಾಯವು ಪಿತೃಪಕ್ಷ ಆಚರಿಸಿ ಕುಟುಂಬದ ಪೂರ್ವಜರು ಸ್ಮರಿಸುವುದನ್ನು ಕಾಣಬಹುದು.
ಸಸ್ಯಾಹಾರಿಗಳು ಕೂಡ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿ ಎಡೆಯಿಡುವ ಪದ್ದತಿ ಇದೆ, ಈ ಸಂದರ್ಭದಲ್ಲಿ ತಮ್ಮ ಹಿರಿಯರು ಯಾವ ತಿಂಡಿ ತಿನಿಸುಗಳನ್ನು ಬಳಕೆ ಮಾಡುತ್ತಿದ್ದರು, ಅವುಗಳನ್ನೆಲ್ಲ ಸಾಂಕೇತಿಕವಾಗಿ ಇಟ್ಟು ಪೂಜಿಸಲಾಗುತ್ತಿದೆ. ಅನಂತರ ಅವುಗಳನ್ನು ಕುಟುಂಬದವರೇ ಸೇವೆ ಮಾಡುವುದನ್ನು ಕಾಣಬಹುದು.