ಇಂದು ಪ್ರಕಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಹೋಬಳಿಯ ಪಿ.ಹೊಸಹಳ್ಳಿಯ ಗಾರೆ ಕೆಲಸಗಾರನ ಮಗಳು ಹೆಚ್.ಎಸ್. ಅಪೂರ್ವ ಗರಿಷ್ಠ ಅಂಕ (625) ಗಳಿಸಿ ರಾಜ್ಯದ ಟಾಪರ್ ಗಳಲ್ಲಿ ಒಬ್ಬಳಾಗಿದ್ದಾಳೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಎಚ್.ಎಸ್.ಅಪೂರ್ವಳ ತಂದೆ ಸಹದೇವ್ ಗಾರೆ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಾರೆ.
ನುಡಿ ಕರ್ನಾಟಕ.ಕಾಮ್ ಜೊತೆ ಮಾತನಾಡಿದ ಅಪೂರ್ವ, ನಾನು ವೈದ್ಯೆ ಆಗಬೇಕೆನ್ನುವುದು ನನ್ನ ತಂದೆ, ತಾಯಿ,ಅಣ್ಣ, ಅಕ್ಕ, ಮಾವ, ದೊಡ್ಡಮ್ಮರ ಆಸೆ. ಅದಕ್ಕಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಠಿಣ ವ್ಯಾಸಂಗ ಮಾಡಿದೆ.
ನಾನು ಟೈಮ್ ಟೇಬಲ್ ಹಾಕಿಕೊಂಡು ಓದುತ್ತಿರಲಿಲ್ಲ. ಶಾಲೆಯಿಂದ ಬಂದ ನಂತರ ಅಂದಿನ ಪಾಠಗಳನ್ನು ಅಂದೇ ಓದಿಕೊಳ್ಳುತ್ತಿದ್ದೆ. ನಮ್ಮ ಶಾಲೆಯ ಶಿಕ್ಷಕರು ಎಲ್ಲಾ ವಿಷಯಗಳನ್ನು ಚೆನ್ನಾಗಿ ಹೇಳಿಕೊಡುತ್ತಿದ್ದರು. ವಿಷಯಗಳಲ್ಲಿ ಏನೇ ಗೊಂದಲ ಇದ್ದರೂ ಶಿಕ್ಷಕರ ಬಳಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಹಾಗಾಗಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ.
ನನ್ನ ಯಶಸ್ಸಿಗೆ ಕಾರಣರಾದ ಪೋಷಕರು ಹಾಗೂ ಶಿಕ್ಷಕರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ತಂದೆಯ ಆಸೆಯಂತೆ ವೈದ್ಯೆ ಆಗಬೇಕು ಎನ್ನುವುದು ನನ್ನ ಕನಸು. ಅದಕ್ಕಾಗಿ ಪಿಸಿಎಂಬಿ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.